ಉಡುಪಿ: ತಲವಾರಿನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಹಿನ್ನೆಲೆಯಲ್ಲಿ
ಏಳು ಮಂದಿ ಯುವಕರ ವಿರುದ್ದ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಮೂವರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದು,
ಕಾಪು ತಾಲೂಕಿನ ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿರುವ ಜಾರಪ್ಪ ಎಂಬವರ ಮನೆಗೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಪಡುಬಿದ್ರಿ ನಿವಾಸಿಗಳಾದ ಜಿತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಪೊಲೀಸ್ ವಶಕ್ಕೊಳಗಾಗಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಂಡಿರುವ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೇ 30 ರಂದು ಪಡುಬಿದ್ರಿಯ ಜಿತೇಂದ್ರ ಶೆಟ್ಟಿ ಮನೆಯಲ್ಲಿ ಏಳು ಮಂದಿ ತಲವಾರು ಬಳಸಿ ಕೇಕ್ ಕತ್ತರಿಸಿ ನಿರಂಜನ್ ಶೆಟ್ಟಿಗಾರ್ ಹುಟ್ಟುಹಬ್ಬ ಆಚರಿಸಿದ್ದರು.
ಹುಟ್ಟು ಹಬ್ಬ ಆಚರಣೆಯ ವೀಡಿಯೋ ಅನ್ನು ಆರೋಪಿಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಳ್ಳಲು ಉಡುಪಿ ಎಸ್ಪಿಗೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದರು.