ಉಡುಪಿ: ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಿದ್ದ ಕಳ್ಳ 24 ಗಂಟೆಯೊಳಗಾಗಿ ಸಿಕ್ಕಿಬಿದ್ದಿದ್ದು, ದೈವ ಸನ್ನಿಧಿಯಲ್ಲಿ ಪವಾಡ ನಡೆದಿದೆ ಎಂದು ಹೇಳಲಾಗುತ್ತಿದೆ.
ಜುಲೈ 4 ರಂದು ಉಡುಪಿಯ ಚಿಟ್ಪಾಡಿ ಕಸ್ತೂರಬಾ ನಗರ ಬಬ್ಬು ಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿದ್ದು, ಜುಲೈ 5 ರಂದು ಪ್ರಕರಣ ಬೆಳಕಿಗೆ ಬಂದಿತ್ತು.
ಕಳ್ಳತನ ಬೆಳಕಿಗೆ ಬರುತ್ತಿದ್ದಂತೆಯೇ ದೈವಸ್ಥಾನದಲ್ಲಿ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲ್ಪಟ್ಟಿದ್ದು, 24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಡುವುದಾಗಿ ದೈವದ ಅಭಯ ವ್ಯಕ್ತವಾಗಿತ್ತು ಎನ್ನಲಾಗಿದೆ.
ಜುಲೈ 6 ಬೆಳಗ್ಗೆ ಕಳ್ಳ ಉಡುಪಿ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದನ್ನು ಸಿಸಿಟಿವಿಯಲ್ಲಿ ಕಳ್ಳನ ವೀಡಿಯೋ ನೋಡಿದ್ದ ಆಟೋ ಚಾಲಕರೋರ್ವರು ಪತ್ತೆ ಹಚ್ಚಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಳ್ಳತನ ಮಾಡಿದ್ದ ಬಾಗಲಕೋಟೆ ಮೂಲದ ಮುದುಕಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು,
ಬಾಗಲಕೋಟೆಗೆ ತೆರಳಬೇಕಾಗಿದ್ದ ಮುದುಕಪ್ಪ ಬೆಳಗ್ಗೆ 8 ಗಂಟೆಯಾದರೂ ಬಸ್ ನಿಲ್ದಾಣದಲ್ಲೇ ನಿದ್ದೆಯಲ್ಲೇ ಬಾಕಿಯಾಗಿದ್ದಾನೆ.
ಆರೋಪಿ ಕಳ್ಳ ಮುದುಕಪ್ಪ ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿ ಹೊಂದಿದ್ದು, ಚಿಟ್ಪಾಡಿಯ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿದ್ದ ಎನ್ನಲಾಗಿದೆ.
ಕಳ್ಳತನ ಮಾಡಿದ್ದ ಹಣದೊಂದಿಗೆ ಬಾಗಲಕೋಟೆಗೆ ಹೋಗಲು ತಯಾರಿ ನಡೆಸಿದ್ದ ಮುದುಕಪ್ಪ
ಬಸ್ ಸಿಗದ ಕಾರಣ ಬಸ್ ನಿಲ್ದಾಣದಲ್ಲೇ ಮಲಗಿ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಹೀಗಾಗಿ ಬಬ್ಬುಸ್ವಾಮಿ ದೈವ ಮಾತು ಉಳಿಸಿಕೊಂಡಿದ್ದು ದೈವದ ಕಾರಣಿಕ ಎಂದು ಭಕ್ತರು ನಂಬಿದ್ದಾರೆ.