ಬೆಳ್ತಂಗಡಿ : ಮಸೀದಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಮಸೀದಿ ಸದಸ್ಯರು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಉಜಿರೆಯ ಹಳೆಪೇಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ಹಳೆಪೇಟೆಯಲ್ಲಿರುವ ಮೊಯಿದ್ದೀನಿ ಜುಮಾ ಮಸೀದಿಗೆ ನಿನ್ನೆ ರಾತ್ರಿ ಕಳ್ಳನೊಬ್ಬ ನುಗ್ಗಿದ್ದು, ಮದರಸದ ಕಪಾಟು ಹೊಡೆದಿದ್ದು ನಂತರ ಪಾತ್ರೆ ಇಡುವ ರೂಮಿನ ಬಾಗಿಲಿನ ಬೀಗ ಹೊಡೆದು ಹಾಕಿದ್ದಾನೆ.
ಇದನ್ನು ಗಮನಿಸಿದ ಪಕ್ಕದಲ್ಲಿದ್ದ ಹುಸೇನ್ ಎಂಬವರು ಮಸೀದಿಯ ಉಳಿದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಬಂದು ಪರಿಶೀಲನೆ ಮಾಡಿದಾಗ ಕಳ್ಳ ಓಡಿ ಹೋಗಲು ಪ್ರಯತ್ನ ಪಟ್ಟಾಗ ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ವೇಣೂರು ನಿವಾಸಿ ಅಶೋಕ್ (40) ಎಂದು ತಿಳಿಸಿದ್ದು ನಂತರ ಆರೋಪಿಯನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳತನ ಯತ್ನ ನಡೆಸಿದ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಈ ರೀತಿ ಮಾಡುತ್ತಿರುವುದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು ಮಸೀದಿ ಮುಖಂಡರು ಕೇಸು ಬೇಡ ಎಂದು ಬರೆದುಕೊಟ್ಟಿದ್ದು ಅದರಂತೆ ವ್ಯಕ್ತಿಯನ್ನು ಮನೆಯವರ ಜೊತೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.