ಬೆಳ್ತಂಗಡಿ : ತೆಂಕಕರಂದೂರು ಗ್ರಾಮದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಡಬ್ಬ ದಲ್ಲಿದ್ದ ಕಾಣಿಕೆ ಹಣ, ಸಿ ಸಿ. ಟಿ ವಿ., ಡಿವಿಆರ್, ಮೊನಿಟರ್ ಸಹಿತ ಕಳ್ಳತನ ಮಾಡಿದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.
ದೇವಾಲಯದ ಅರ್ಚಕರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿನ ಬೀಗ ಒಡೆದು ಅರ್ಧ ಬಾಗಿಲು ತೆರೆದಿದ್ದು , ಸಂಶಯ ಬಂದು ತಕ್ಷಣ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿ, ಪರಿಶೀಲಿಸಿದಾಗ ಕಳ್ಳರು ನುಗ್ಗಿದ್ದು ಬೆಳಕಿಗೆ ಬಂದಿದೆ.
ವೇಣೂರು ಠಾಣೆಗೆ ಮಾಹಿತಿ ಪಿಎಸ್ಐ ಸೌಮ್ಯ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸಿ ತನಿಖೆ ನಡೆಸಲಾಗಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಠಾಣಾಧಿಕಾರಿ ಸೌಮ್ಯ ಕೆಲವು ಮುಂಜಾಗ್ರತೆಯ ಮಾಹಿತಿ ನೀಡಿ, ಈ ತನಿಖೆಯನ್ನು ಅತ್ಯಂತ ಶೀಘ್ರವಾಗಿ ನಡೆಸುವುದಾಗಿ ಭರವಸೆ ನೀಡಿದರು. ಈ ಹಿಂದೆಯೂ ಇದೇ ದೇವಸ್ಥಾನದಲ್ಲಿ ಕಳ್ಳತನವಾಗಿ ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತು ಗಳನ್ನು ಕಳವುಗೈದರೂ ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ. ಅದಲ್ಲದೆ ಇತ್ತೀಚೆಗೆ ಮುಂಡೂರು ಸೇರಿದಂತೆ ಸ್ಥಳೀಯ ಪ್ರದೇಶದ ಕೆಲವು ದೇವಸ್ಥಾನದಲ್ಲಿ ಕಳ್ಳತನದ ಪ್ರಕರಣಗಳು ನಡೆದಿದೆ.