ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕರ್ತವ್ಯಕ್ಕೆ ಬಳಸಿದ ವಾಹನಗಳ ಬಾಡಿಗೆ ಹಣ ಪಾವತಿಸುವಂತೆ ದಕ್ಷಿಣ ಕನ್ನಡ ಟ್ಯಾಕ್ಸಿ ಮೆನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಒತ್ತಾಯಿಸಿದೆ.
ನಗರದಲ್ಲಿ ಗುರುವಾರದಂದು ಚುನಾವಣಾ ಸಂದರ್ಭದಲ್ಲಿ ಬಳಸಿದ ವಾಹನಗಳ ಬಾಕಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ಸಂಘದ ಪ್ರಮುಖರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ‘ವಿಧಾನಸಭಾ ಚುನವಣಾ ಕರ್ತವ್ಯಕ್ಕೆ ನಮ್ಮ ಸಂಘದ ಸದಸ್ಯರ ಹಲವಾರು ವಾಹನಗಳನ್ನು ಜಿಲ್ಲಾಡಳಿತ ಬಳಸಿಕೊಂಡಿತ್ತು. ಆದರೆ, ಬೆರಳೆಣಿಕೆಯ ವಾಹನಗಳಿಗೆ ಮಾತ್ರ ಬಾಡಿಗೆ ಪಾವತಿಸಿದ್ದರೆ. ಅದರಲ್ಲೂ ಸರ್ಕಾರ ನಿಗದಿ ಪಡಿಸಿದ್ದ ದರವನ್ನು ನೀಡಿಲ್ಲ. ಈ ಕುರಿತು ನಮ್ಮ ಸಂಘವು ಹಲವು ಬಾರಿ, ಜಿಲ್ಲಾಡಳಿತಕ್ಕೆ, ಜಿಲ್ಲಾಧಿಕಾರಿಗೆ, ಸಾರಿಗೆ ಇಲಾಖೆಗೆ ಹಾಗೂ ಸಚಿವರಿಗೆ ಹಾಗೂ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾಧಿಕಾರಿಗೆ ಅಹವಾಲು ಸಲ್ಲಿಸಿದ್ದೆವು. ಆದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.
‘ತಕ್ಷಣವೇ ಬಾಕಿ ಮೊತ್ತವನ್ನು ಬಿಡುಗಡೆ ಮಾಡದೇ ಹೋದರೆ, ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ಯಾವುದೇ ಕಾರಣಕ್ಕೂ ನಮ್ಮ ಸಂಘದ ಸದಸ್ಯರುಗಳ ವಾಹನವನ್ನು ನೀಡುವುದಿಲ್ಲ. ಚುನಾವಣಾ ಜರೂರು ಎಂದು ಬಲವಂತವಾಗಿ ವಾಹನ ವಶಕ್ಕೆ ವಶಪಡಿಸಿಕೊಂಡಲ್ಲಿ ಜಿಲ್ಲೆಯ ಸಮಾನ ಮನಸ್ಕರ ಸಂಘಟಣೆಗಳ ಜೊತೆ ಸೇರಿ ಪ್ರತಿಭಟನೆ ನಡೆಸುತ್ತೇವೆ. ಈ ಕುರಿತು ಕಾನೂನು ಹೋರಾಟವನ್ನು ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.