ತುಮಕೂರು: ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟು ಅಧಿಕೃತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ವ್ಯಕ್ತಿಯೊಬ್ಬ ಮುಂಜಿಗೆ ಹೆದರಿ ಮರಳಿ ಹಿಂದೂ ಧರ್ಮಕ್ಕೆ ಬಂದಿರುವ ಘಟನೆ ತುಮಕೂರಿನ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು ಹೆಸರು ಬದಲಿಸಿಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಬಳಿಕ ಮುಂಜಿಗೆ ಹೆದರಿ ‘ಘರ್ ವಾಪ್ಸಿ’ (ಮರಳಿ ಹಿಂದೂ ಧರ್ಮಕ್ಕೆ) ಮಾಡಿದರು.
ಸಕ್ಕರೆ ಕಾಯಿಲೆ ಇರುವುದರಿಂದ ಮುಂಜಿ ಮಾಡಿಸಿಕೊಳ್ಳಲು ಆಗುವುದಿಲ್ಲ. ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡುವುದು ಎಂದು ಚಂದ್ರಶೇಖರಯ್ಯ ತಿಳಿಸಿದರು. ಸ್ವ-ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ’ ಎಂದು ಆಗಸ್ಟ್ 18ರಂದು ಚಂದ್ರಶೇಖರಯ್ಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಇದೀಗ ಮನಸ್ಸು ಬದಲಿಸಿಕೊಂಡು ಹಿಂದೂ ಧರ್ಮಕ್ಕೆ ಮರಳಿ ಬಂದಿರುವ ಅವರು ‘ಮುಂದೆಯೂ ಮತಾಂತರಕ್ಕೆ ಯತ್ನಿಸುವುದಿಲ್ಲ’ ಎಂದು ಹೇಳಿದ್ದಾರೆ.