ಪುತ್ತೂರು: ಮಗುವಿಗೆ ಜನ್ಮನೀಡಿದ ಒಂದು ದಿನದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟ ಹೃದಯವಿದ್ರಾವಕ ಘಟನೆ ಜು 23 ರಂದು ನಡೆದಿದೆ. ಪುತ್ತೂರು ತಾಲೂಕಿನ ಪಡೂರು ಗ್ರಾಮದ ಪರಮಾರು ಮನೆಯ ಕೂಸಪ್ಪ ಗೌಡರವರ ಪತ್ನಿ ಮೋನಮ್ಮ (36) ಮೃತ ಮಹಿಳೆ.
ಎರಡನೇ ಮಗುವಿನ ಹೆರಿಗೆಗೆಂದು ಜು. 21 ರಂದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು. 22 ರಂದು ಸಂಜೆ ಅವರು ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಬಾಣಂತಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿದೆ ಎನ್ನಲಾಗಿದೆ.
ರಕ್ತ ಸ್ರಾವ ನಿಂತು ಬಿಪಿ ಕಡಿಮೆಯಾಗಿದೆ ಕೂಡಲೇ ತಾಯಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಪುತ್ತೂರಿನ ವೈದ್ಯರು ತಿಳಿಸಿದ್ದಾಗಿ ಕುಟುಂಬದ ಮೂಲಗಳು ತಿಳಿಸಿವೆ. ತಕ್ಷಣ ಅವರನ್ನು ಪುತ್ತೂರಿನಿಂದ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಮಂಗಳೂರಿನಲ್ಲಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೋನಮ್ಮ ಮೃತಪಟ್ಟಿದ್ದಾರೆ. ತಾಯಿಯನ್ನು ಕಳಕೊಂಡ ಮಗು ತಬ್ಬಲಿಯಾಗಿದ್ದು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ