ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಕುಕ್ಕುಂದೂರು ದುರ್ಗಾನಗರದ ಅಶ್ವಥಕಟ್ಟೆ ಸಮೀಪ ನಡೆದಿದೆ.
ಮಹಮ್ಮದ್ ರಫೀಕ್ ಘಟನೆಯಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ರಫೀಕ್ ತನ್ನ ಸಹೋದರ ನಜೀರ್ ಎಂಬವರ ಜೊತೆಗೆ ಓಮಿನಿ ಕಾರಿನಲ್ಲಿ ಉಡುಪಿಯಿಂದ ಮನೆಗೆ ಬರುತ್ತಿದ್ದರು. ದುರ್ಗಾನಗರದ ಅಶ್ವಥಕಟ್ಟೆ ಹತ್ತಿರ ವಾಹನ ನಿಂತಾಗ ಅದರಲ್ಲಿದ್ದ ರಫೀಕ್ ಹೊರಬಂದು ರಸ್ತೆ ದಾಟಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮತ್ತೊಂದು ಕಾರು ಇವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ರಸ್ತೆಗೆ ಬಿದ್ದಿದ್ದ ರಫೀಕ್ ಅವರ ತಲೆಯ ಹಿಂಬದಿಗೆ ಪೆಟ್ಟಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಕಾರು ಚಲಾಯಿಸಿ ಘಟನೆಗೆ ಕಾರಣನಾದ ಕೆದಿಂಜೆಯ ಅರವಿಂದ ಕಾಮತ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.