ಮಂಗಳೂರಿನಿಂದ ಉಡುಪಿಗೆ ಖಾಸಗಿ ಬಸ್ ನಲ್ಲಿ ಬರುತ್ತಿದ್ದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿಯನ್ನು ತಡೆದು ಪ್ರಶ್ನಿಸಿದ ವಿಚಾರ ಬಹು ಚರ್ಚೆಗೆ ಒಳಪಟ್ಟಿದೆ. ಈ ವಿಷಯದ ಕುರಿತು ಸುಮೋಟೋ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಮಂಗಳೂರು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಇದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕರಾವಳಿಯ ಸಂಸದರಿಗೆ ಹಾಗೂ ಬಿಜೆಪಿಯ ಶಾಸಕರಿಗೆ ಕೈಗೆ ಹಾಕಿಕೊಳ್ಳಲು ಬಳೆ ಕಳುಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿದೆ.
ಹಾಗೇ ಸಂಸದ ನಳಿನ್ ಕುಮಾರ್, ಶಾಸಕ ಹರೀಶ್ ಪೂಂಜಾ , ವೇದವ್ಯಾಸ ಕಾಮತ್, ಸಚಿವ ಸುನೀಲ್ ಕುಮಾರ್ ಇವರೆಲ್ಲರ ನಂಬರ್ ಪ್ರಕಟಿಸಿ ಯಾವಾ ಪುರುಷಾರ್ಥಕ್ಕೆ ನಿಮಗೆ ಮತಕೊಟ್ಟದ್ದು ಎಂದು ಪ್ರಶ್ನಿಸುವಂತೆ ಒತ್ತಾಯಿಸುತಿದ್ದಾರೆ.
“ಕಟೀಲರೇ ನಿಮಗೆ ತಾಕತ್ತಿಲ್ಲವಾದರೆ ರಾಜೀನಾಮೆ ಕೊಟ್ಟು ಬಿಡಿ. ಇಲ್ಲಿ ಹಿಂದುಸಮಾಜಕ್ಕಾಗಿ ದುಡಿಯುವ ಹಿಂದೂ ಕಾರ್ಯಕರ್ತರು ಈ ಪೋಲೀಸರ ಕಿರುಕುಳದಿಂದ ಒಡೆದುಹೋಗುತಿದ್ದಾರೆ. ನೀವು ಗೆದ್ದಿರುವುದು ನಿಮ್ಮ ಶಕ್ತಿಯಿಂದ ಅಲ್ಲ. ಕಾರ್ಯಕರ್ತರನ್ನು ಸ್ವಲ್ಪ ನೆನಪಿಸಿಕೊಳ್ಳಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದು ಎಲ್ಲೆಡೆ ವೈರಲ್ ಆಗುತ್ತಿದೆ.
ದೇಶದ ಮೂರು ಸೇನೆಯ ದಂಡನಾಯಕನ ಮರಣವನ್ನು ವಿಕೃತವಾಗಿ ಸಂಭ್ರಮಿಸುವವರನ್ನು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಬಂಧಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಾಗೇ ಇನ್ನೊಂದು ಪೋಸ್ಟ್ ನಲ್ಲಿ ಬಿಜೆಪಿ ಸರ್ಕಾರ ಇರುತ್ತಿದ್ದರೆ ಹಿಂದೂ ಕಾರ್ಯಕರ್ತರಿಗೆ ಈ ಸ್ಥಿತಿ ಇರುತ್ತಿರಲಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕೆ ಮಾಡಿದ್ದಾರೆ.
ಈ ವಿಷಯ ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.