ದಕ್ಷಿಣ ಕನ್ನಡ: ಸಾಮಾನ್ಯವಾಗಿ ಏಪ್ರಿಲ್ ಮಧ್ಯ ಭಾಗದಿಂದ ಮೇ 4ನೇ ವಾರದ ತನಕ ಸಿಗುವ ಕಾಡು ಜೇನಿಗೆ ಭಾರಿ ಬೇಡಿಕೆ ಇದೆ. ಆದರೆ ಬೇಸಿಗೆ ಮಳೆಯ ಪರಿಣಾಮ ಇದರ ಇಳುವರಿ ಇಳಿಮುಖವಾಗಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಲ್ಮಂಜ, ಚಾರ್ಮಾಡಿ, ನೆರಿಯ, ತೋಟತ್ತಾಡಿ, ಚಿಬಿದ್ರೆ ಸೇರಿದಂತೆ ಅನೇಕ ಭಾಗಗಳಲ್ಲಿ ರಕ್ಷಿತಾರಣ್ಯಗಳಿದ್ದು, ಅವುಗಳಲ್ಲಿ ವರ್ಷವೂ ಸಾಕಷ್ಟು ಕಾಡು ಜೇನು ಲಭಿಸುತ್ತದೆ. ವಿಶೇಷವಾಗಿ ಕೊರಗ ಸಮುದಾಯದವರು ಕಾಡು ಜೇನಿನ ಬಿಡಾರಗಳನ್ನು ಹುಡುಕುವುದರಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ಅಲ್ಲಲ್ಲಿ ಇರುವ ಇವರಿಗೆ ಒಂದೂವರೆ ತಿಂಗಳ ಕಾಲ ಕಾಡು ಜೇನು ಸಂಗ್ರಹ ಒಂದು ಕಸುಬಾಗಿದೆ. ಇದರಿಂದ ಕೆಲವರಿಗೆ ಹೆಚ್ಚಿನ ಆದಾಯವೂ ಸಿಗುತ್ತದೆ.
ಶುದ್ಧ ಹಾಗೂ ನೈಸರ್ಗಿಕವಾದ ಕಾಡು ಜೇನನ್ನು ಇವರು ಎರಿಗಳ ಸಮೇತ ಸಂಗ್ರಹಿಸಿ ಮನೆಗಳಿಗೆ ತಂದು ಮಾರಾಟ ಮಾಡುತ್ತಾರೆ. ಯಾವುದೇ ರೀತಿಯ ಕಲಬೆರಕೆ ಇಲ್ಲದ ನೈಸರ್ಗಿಕವಾಗಿ ಸಂಗ್ರಹವಾಗುವ ಈ ಜೇನು ತುಪ್ಪ ಹಲವಾರು ರೀತಿಯ ಮನೆ ಔಷಧಗಳಿಗೆ ಬಳಕೆಯಾಗುತ್ತದೆ. ಇಲ್ಲಿ ಲೀಟರ್ ಅಥವಾ ಕೆಜಿ ಲೆಕ್ಕ ಇರುವುದಿಲ್ಲ. ಕುಡ್ತೆಗಳ ಲೆಕ್ಕದಲ್ಲಿ ವ್ಯವಹಾರ ನಡೆಯುತ್ತದೆ. ಕುಡ್ತೆ ಒಂದಕ್ಕೆ ಪ್ರಸ್ತುತ 100 ರಿಂದ 120 ರೂ. ತನಕ ದರ ಇದೆ. ಗ್ರಾಮೀಣ ಭಾಗದ ಜನರು ಹಲವು ಉಪಯೋಗ ಹಾಗೂ ನಗರ ಭಾಗದಲ್ಲಿರುವ ತಮ್ಮ ನೆಂಟರಿಗೆ ನೀಡಲು ಪ್ರತಿ ವರ್ಷ ಹಲವಾರು ಕುಡ್ತೆ ಜೇನು ತುಪ್ಪ ಸಂಗ್ರಹಿಸುವುದು ಮಾಮೂಲು. ಇದರಿಂದ ಇದಕ್ಕೆ ಉತ್ತಮ ಬೇಡಿಕೆ ಇದೆ.
ಹಳ್ಳಿಯ ಕಾಡುಗಳಲ್ಲಿ, ಕೊಳ್ಚ, ಮುಜಂಟಿ, ತೊಡ್ವೆ, ಪೆರಿಯ, ಬಜಡ್ಪೆ ಮೊದಲಾದ ಹೆಸರುಗಳಿಂದ ಜೇನು ಗೂಡುಗಳನ್ನು ಗುರುತಿಸಲಾಗುತ್ತದೆ. ಕೊಳ್ಚ ಮುಜಂಟಿಯಲ್ಲಿ ಲಭ್ಯತೆ ಕಡಿಮೆ. ತೊಡ್ವೆಯಲ್ಲಿ ಸಾಮಾನ್ಯ, ಬಜಡ್ಪೆ, ಪೆರಿಯಗಳಲ್ಲಿ ಲಭ್ಯತೆ ಅಧಿಕ ಇರುತ್ತದೆ. ಎತ್ತರದ ಮರ, ಪೊಟರೆ, ಬಿದಿರು, ಹುತ್ತ ಮೊದಲಾದ ಅಪಾಯಕಾರಿ ಪ್ರದೇಶಗಳಲ್ಲಿ ಜೇನು ಹುಳ ಗೂಡನ್ನು ಕಟ್ಟಿರುತ್ತವೆ. ಕಾಡಲ್ಲಿ ಅಲೆಯುತ್ತಾ ಇವನ್ನು ಹುಡುಕಬೇಕು. ಯಾವ ಪ್ರದೇಶಗಳಲ್ಲಿ ಗೂಡು ಕಟ್ಟಿರಬಹುದು ಎಂದು ಹುಡುಕಲು ಪರಿಣತಿ ಇರಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಜೇನಿನಿಂದ ಸಿಗುತ್ತಿದ್ದ ಆದಾಯ ಕಡಿಮೆ ಇದೆ.
ದಕ್ಷಿಣ ಕನ್ನಡ: ಅಕಾಲಿಕ ಬೇಸಿಗೆ ಮಳೆಯ ಪರಿಣಾಮ ಕಾಡು ಜೇನಿನ ಇಳುವರಿ ಇಳಿಮುಖ
- Advertisement -
- Advertisement -
- Advertisement -