ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಗಾಣೆಮಾರ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಪ್ರಯಾಣಿಕ ಮೂವರು ಮಕ್ಕಳಿಗೆ ಗಾಯವಾಗಿರುವ ಘಟನೆ ಫೆ. 14ರ ಶುಕ್ರವಾರ ಮಧ್ಯರಾತ್ರಿ ವೇಳೆ ಸಂಭವಿಸಿದೆ.
ಮೃತಪಟ್ಟ ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ (37) ಎಂದು ತಿಳಿದು ಬಂದಿದೆ. ಮಹಾಬಲ ಅವರು ಅವಿವಾಹಿತರಾಗಿದ್ದರು.
ಮೂಡಬಿದರೆಯ ಮಿಜಾರು ಎಂಬಲ್ಲಿಗೆ ಮಹಾಬಲ ಅವರು ತಮ್ಮ ರಿಕ್ಷಾದಲ್ಲಿ ಸಂಬಂಧಿ ಮಕ್ಕಳಾದ ತುಷಾರ್, ಭವಿತ್ ಮತ್ತು ಪ್ರದೀಪ್ ಅವರನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದು, ಅವರು ಜಾತ್ರೆಯಿಂದ ವಾಪಸ್ ಮನೆಗೆ ಬರುವ ವೇಳೆ ಈ ಘಟನೆ ನಡೆದಿದೆ. ಮನೆಗೆ ಸುಮಾರು 500 ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದ್ದು, ಚಾಲಕ ರಿಕ್ಷಾದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟರೆ ಉಳಿದಂತೆ ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇನ್ನು ರಿಕ್ಷಾವು ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದಿದೆ.
ಈ ಕುರಿತಂತೆ ಪಾಣೆಮಂಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.