ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿ ಶಾಸನವೊಂದು ಪತ್ತೆಯಾಗಿದ್ದು, 15ನೆ ಶತಮಾನ ಕ್ಕೆ ಸೇರಿದ ಶಾಸನ ಇದು ಎಂದು ತಿಳಿದುಬಂದಿದೆ. ಶಾಸನವನ್ನು ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ.ಕೃಷ್ಣಯ್ಯ ಮತ್ತು ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿದ್ದಾರೆ.
ಶಾಸನವು ಸಂಜೀವ ಪ್ರಭು ಅವರಿಗೆ ಸೇರಿದ ಜಾಗದಲ್ಲಿ ಪತ್ತೆಯಾಗಿದ್ದು ಕಣ ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿರುವ ಈ ಶಾಸನದಲ್ಲಿ ಕನ್ನಡ ಲಿಪಿ ಮತ್ತು ಭಾಷೆಯ 38 ಸಾಲುಗಳಿವೆ. ಮೇಲ್ಭಾಗದಲ್ಲಿರುವ ವಾಮನ ಮೂರ್ತಿಯ ಇಕ್ಕೆಲಗಳಲ್ಲಿ ಶಂಖ-ಚಕ್ರ, ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. ‘ಸ್ವಸ್ತಿ ಶ್ರೀ ಗಣಾಧಿಪತಯೆ ನಮ’ ಎಂಬ ಶ್ಲೋಕದ ತಲೆ ಬರಹವಿರುವ ಈ ಶಾಸನವು ಶಕವರುಷ 1442 ವರ್ತಮಾನ ಪ್ರಮಾಧಿ ಸಂವತ್ಸರದ ಶ್ರಾವಣ ಶುದ್ಧ 15 ಬುಧವಾರ ಅಂದರೆ ಕ್ರಿ. ಶ 1519 ಆಗಸ್ಟ್ 21 ಬುಧವಾರಕ್ಕೆ ಸೇರಿದೆ.
ಶಾಸನದಲ್ಲಿ ಚತುಸೀಮೆಯ ಉಲ್ಲೇಖವಿದ್ದು ಮುಖ್ಯವಾಗಿ ಕೆಳ ಸಾಲಿಗ್ರಾಮ, ನಾಯಕನ ಕಟ್ಟೆ, ನೇರಳಕಟ್ಟೆ ಇನ್ನಿತರ ಸ್ಥಳಗಳ ಉಲ್ಲೇಖವಿದೆ. ಶಾಸನದಲ್ಲಿ ಗದ್ದೆ ಹಾನೆ 60, ಮುಡಿ 42, ಶುದ್ಧ ಆದಾಯದ ವೆಚ್ಚಳಕ್ಕೆ ವರಹಾ ಗದ್ಯಾಣ 24 ನ್ನು ಶ್ರೀ ಹೆಮ್ಮಾಡ ಗೋಪಿನಾಥ ದೇವರ ಅಮ್ರುತಪಡಿ ಮತ್ತು ನಂದಾದೀಪ್ತಿಗೆ ದಾನವನ್ನು ಬಿಟ್ಟಿರುವುದು ಇದು ವರ್ಷಂಪ್ರತಿ ನಡೆಯುವ ರೀತಿ ನೋಡಿಕೊಳ್ಳಬೇಕೆಂಬ ಉಲ್ಲೇಖವಿದೆ.ಉಡುಪಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಇಂತಹ ಶಾಸನಗಳು ಲಭ್ಯವಾಗುತ್ತಿದ್ದು, ಪೂರ್ವ ಪರಂಪರೆಯ ಬಗ್ಗೆ ಜನರಲ್ಲಿ ಹೆಮ್ಮೆ ಮೂಡಿಸುತ್ತದೆ.