ಚಿಕ್ಕಮಗಳೂರು: ರಾಜ್ಯ ಸರ್ಕಾರವು ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗೆ ಒತ್ತು ನೀಡುವ ಸಲುವಾಗಿ ಹಾಗೂ ಗೋವುಗಳ ಉಳಿವಿಗಾಗಿ ಹೆಜ್ಜೆಯಿಟ್ಟಿದ್ದು ಜುಲೈ ತಿಂಗಳಿನಲ್ಲಿ ಐದು ಗೋಶಾಲೆಗಳನ್ನು ಐದು ಜಿಲ್ಲೆಗಳಲ್ಲಿ ಲೋಕಾರ್ಪನೆ ಮಾಡಲಿದೆ.
ಜುಲೈ ತಿಂಗಳಿನಲ್ಲಿ ಪ್ರಾಥಮಿಕ ಹಂತದಲ್ಲಿ ಐದು ಜಿಲ್ಲೆಗಳಾದ ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಮೈಸೂರು ಹಾಗೂ ತುಮಕೂರಿನಲ್ಲಿ ಗೋಶಾಲೆಯನ್ನು ಲೋಕಾರ್ಪಣೆ ಮಾಡುವ ಸಲುವಾಗಿ ಸಿದ್ಧತೆಗಳು ಈಗಾಗಲೇ ಆರಂಭವಾಗಿದೆ.
ಇನ್ನೂ ನಿರ್ಮಾಣ ಮಾಡಿರುವ ಈ ಗೋಶಾಲೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೊಟ್ಟಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಗೋವುಗಳ ಆರೋಗ್ಯದ ಮೇಲೆ ನಿಗಾವಹಿಸಲು ಪಶುವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಸರ್ಕಾರವು ಪ್ರತಿಯೊಂದು ಗೋಶಾಲೆ ಪ್ರಾರಂಭ ಮತ್ತು ನಿರ್ವಹಣೆಗೆ 50 ಲಕ್ಷ ರೂ. ಗಳನ್ನು ನಿಗದಿಪಡಿಸಿದ್ದು, ಪ್ರತಿಯೊಂದು ಗೋಶಾಲೆಗಳಲ್ಲಿ 100 ರಿಂದ 150 ಗೋವುಗಳ ಪೋಷಣೆಗೆ ಅಗತ್ಯವಿರುವಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.