Saturday, April 27, 2024
Homeತಾಜಾ ಸುದ್ದಿನಾಲ್ಕನೇ ಮಹಡಿಯಿಂದ ಬಿದ್ದು ಪ್ಲಂಬಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾವು

ನಾಲ್ಕನೇ ಮಹಡಿಯಿಂದ ಬಿದ್ದು ಪ್ಲಂಬಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾವು

spot_img
- Advertisement -
- Advertisement -

ಮುಡಿಪು: ಇಲ್ಲಿನ ಐಟಿ ಸಂಸ್ಥೆಯೊಂದರ ಪ್ಲಂಬಿಂಗ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂಲ್ಕಿ ಕಿಲ್ಪಾಡಿ ಎಣ್ಣೆಗೇಣಿ ನಿವಾಸಿ ರಾಜೇಶ್‌ ದೇವಾಡಿಗ (32) ಅವರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎಂಟು ವರ್ಷಗಳಿಂದ ಸಂಸ್ಥೆಯ ಪ್ಲಂಬಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್‌ ಮಂಗಳವಾರ ಸಂಜೆ ಖಾಲಿ ಇರುವ ಕಟ್ಟಡಕ್ಕೆ ತೆರಳಿದ್ದು, ವಾಪಸ್‌ ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಕಟ್ಟಡದಿಂದ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ರಾತ್ರಿ ಸೆಕ್ಯುರಿಟಿಯವರಿಗೆ ಒಳಗೆ ಹೋಗಿರುವ ಒಬ್ಬ ವ್ಯಕ್ತಿ ಹೊರಗೆ ಬಾರದೆ ಇರುವುದು ಗೊತ್ತಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಇದೇ ಸಂದರ್ಭ ಕತ್ತಲಾದರೂ ರಾಜೇಶ್‌ ಮನೆಗೆ ವಾಪಸ್‌ ಬಾರದಿರುವ ಕುರಿತು ಕರೆ ಬಂದಿತ್ತು. ಕೂಡಲೇ ಸಂಸ್ಥೆಯ ಸಿಬ್ಬಂದಿ ಬಂದು ಸಿಸಿಟಿವಿ ಆಧಾರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಹುಡುಕಾಡಿದ್ದರು.

ಆದರೆ ರಾತ್ರಿ ಸಮಯವಾದ್ದರಿಂದ ಏನೂ ತಿಳಿದಿರಲಿಲ್ಲ. ಮರುದಿನ ಬೆಳಗ್ಗೆ ಪೊಲೀಸರ ಸಮ್ಮುಖದಲ್ಲಿ ಹುಡುಕಾಡಿದಾಗ ಮೊದಲ ಮಹಡಿಯ ಪೈಪ್‌ಲೈನ್‌ ಎಳೆಯುವ ಖಾಲಿ ಜಾಗದಲ್ಲಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಇದೇ ಸ್ಥಳದಲ್ಲಿ ಅವರ ಮೊಬೈಲ್‌ ಕೂಡ ಬಿದ್ದಿತ್ತು.

ಜಾರಿ ಬಿದ್ದು ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್‌ ತಜ್ಞರು ಆಗಮಿಸಿ ತನಿಖೆ ನಡೆಸಿದ್ದು ನಾಲ್ಕನೇ ಮಹಡಿಯಿಂದ ಬಿದ್ದು ತಲೆ ಮತ್ತು ಕೈ ಕಾಲಿಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿರುವ ಸಹೋದರನೊಂದಿಗೆ ಕೊನೆಯದಾಗಿ ರಾಜೇಶ್‌ ಮಾತನಾಡಿದ್ದಾಗಿ ತಿಳಿದುಬಂದಿದೆ. ಅವರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿ ದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!