ಬೆಂಗಳೂರು: ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಮೆಟ್ರೋ ದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರ ಎಂದು ಹೇಳಿದ್ದು, ಇದಕ್ಕೆ ಪ್ರತಿದಾಳಿ ನಡೆಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೆಟ್ರೋ ಪ್ರಯಾಣ ದರ ಏರಿಸಿದ್ದು ಕೇಂದ್ರ ಸರ್ಕಾರ ಎಂದು ತಿಳಿಸಿದ್ದಾರೆ.
ಅವರು ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ಈ ಕುರಿತಂತೆ ಮಾತನಾಡಿ, ‘ದೇಶದಲ್ಲಿ ಎಲ್ಲಾ ಮೆಟ್ರೋಗಳು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುತ್ತಿದೆ. ಆದರೆ ಇಲ್ಲಿ ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಗೂಬೆ ಕೂರಿಸುತ್ತಿದೆ. ಇಲ್ಲಿ ಮುಖ್ಯವಾಗಿ ಮೆಟ್ರೋಗಳಿಗೆ ಸಂಬಂಧಿಸಿದಂತೆ ಬೋರ್ಡ್ ಇರುತ್ತದೆ. ದರ ಏರಿಕೆಗೆ ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆಯುತ್ತದೆ. ಪತ್ರ ಬರೆದ ಮೇಲೆ ಸಮಿತಿ ರಚನೆ ಮಾಡುತ್ತಾರೆ. ಬೆಂಗಳೂರು ಮೆಟ್ರೋ ಸಮಿತಿಯ ಅಧ್ಯಕ್ಷರು ನಿವೃತ್ತಿ ಜಡ್ಜ್ ತಾರಿಣಿ, ಕೇಂದ್ರದ ಪ್ರತಿನಿಧಿ ಸತೀಂದ್ರ ಪಾಲ್ ಸಿಂಗ್, ರಾಜ್ಯದ ಪ್ರತಿನಿಧಿ ರಮಣರೆಡ್ಡಿ ಇದ್ದರು. ಈ ಸಮಿತಿ ಸಭೆ ಮಾಡಿ ಎಷ್ಟು ಏರಿಕೆ ಆಗಬೇಕು ಅಂತ ತೀರ್ಮಾನ ಮಾಡುತ್ತದೆ.
ಇಲ್ಲಿ ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.