ಬೆಳ್ತಂಗಡಿ: ಕಳೆದ ಮೂರು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಕಾರಿನಲ್ಲಿ ಬೆಳ್ತಂಗಡಿಯ ಮೂವರ ಶವ ಪತ್ತೆಯಾಗಿತ್ತು. ಈ ಸುದ್ಧಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅದರೆ ಬೆಳ್ತಂಗಡಿಯ ಜನಪ್ರತಿನಿಧಿಗಳಿಗೆ ಮಾತ್ರ ಇನ್ನೂ ಈ ವಿಚಾರ ತಿಳಿದಂತಿಲ್ಲ. ಯಾಕೆಂದರೆ ಮೃತ ಮನೆಯವರಿಗೆ ಬಂದು ಸಾಂತ್ವನ ಹೇಳಿ ಧ್ಯೈರ್ಯ ಹೇಳುವಷ್ಟೂ ವ್ಯವಧಾನ ಅವರಿಗೆ ಇಲ್ಲದಾಗಿದೆ ಎಂದು ಮೃತ ಮನೆಯವರ ಕುಟುಂಬಸ್ಥರು ಹಾಗೂ ನೆರೆ ಹೊರೆಯವರು ಬೇಸರ ವ್ಯಕ್ತಪಡಿಸಿದ್ದಾರೆ.
ಉಜಿರೆ ಕುಂಟಿನಿ ನಿವಾಸಿ ಸಾಹುಲ್ ಹಮೀದ್ ಅವರ ನೆರೆಯ ವ್ಯಕ್ತಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಇಡೀ ಸಮಾಜ ಈ ಘಟನೆಯಿಂದ ನೊಂದಿದೆ. ಮೃತ ಶರೀರವನ್ನು ಅತೀ ಕ್ರೂರ ರೀತಿಯಲ್ಲಿ ಕೊಂದು ಸುಟ್ಟು ಹಾಕಿದ ಪರಿಣಾಮ ಮೂವರ ಮೃತ ದೇಹದ ಗುರುತು ಸಿಗದ ರೀತಿಯಲ್ಲಿ ಇದೆ. ಕುಟುಂಬಸ್ಥರು ಇದರ ಬಗ್ಗೆ ಯಾರಲ್ಲಿ ಹೇಳುವುದು ನಮಗೆ ನ್ಯಾಯ ದೊರಕಿಸಿಕೊಡುವವರು ಯಾರು ಎಂದು ಕಣ್ಣೀರು ಸುರಿಸುತಿದ್ದರೂ ಬೆಳ್ತಂಗಡಿ ತಾಲೂಕಿನ ಶಾಸಕರು ಸೇರಿದಂತೆ ಯಾರೂ ಕೂಡ ಮನೆಯವರಿಗೆ ಧೈರ್ಯ ತುಂಬುವ ಕೆಲಸ ಮಾಡದಿರುವುದು ತುಂಬಾ ನೋವನ್ನುಂಟು ಮಾಡಿದೆ,’ ಎಂದಿದ್ದಾರೆ.
ಮದ್ದಡ್ಕದ ಇಸಾಕ್ ಅವರ ಕುಟುಂಬಿಕರು ಬೇಸರ ವ್ಯಕ್ತಪಡಿಸಿ, ‘ಹೊರ ತಾಲೂಕಿನ ಕೆಲವು ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಖಂಡಿಸುವ ಅಥವಾ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವಂತಹ ಒಂದು ಹೇಳಿಕೆ ನೀಡದಿರುವುದು ಬೇಸರ,’ ತರಿಸಿದೆ.
ಮಸಲ್ಮಾನರೆಂಬ ಕಾರಣಕ್ಕೆ ಈ ರೀತಿಯ ನಿರ್ಲಕ್ಷ್ಯವೇ ಯಾರಿಗೂ ಈ ರೀತಿ ಮಾಡಬಾರದು ಎಲ್ಲಾ ವಿಚಾರದಲ್ಲಿ ರಾಜಕೀಯ ಯೋಚನೆ ಮಾಡಬಾರದು ಕೆಲವೊಮ್ಮೆ ರಾಜಕೀಯ ಮರೆತು ಮಾನವೀಯತೆಯತ್ತ ಯೋಚನೆ ಮಾಡಬೇಕಾಗಿದೆ.
ಶಿರ್ಲಾಲಿನ ಸಿದ್ದಿಕ್ ಅವರ ತಂದೆ ಮಾತನಾಡಿ, ‘ನನ್ನ ಮಗ ಇನ್ನು ಬರುವುದಿಲ್ಲ. ನಮ್ಮ ತಾಲೂಕಿನ ಯಾವನೇ ಒಬ್ಬ ಜನಪ್ರತಿನಿಧಿ ನಮಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಯಾಕೆಂದರೆ ನಾವು ಬಡವರು ಎಂಬ ಕಾರಣಕ್ಕೊ ಅಥವಾ ಇನ್ನೇನಾದರೂ ಕಾರಣವೋ ಗೊತ್ತಿಲ್ಲ ಎಂದು,’ ದುಃಖಿಸಿದರು.