ಕಾಸರಗೋಡು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಬಾವಿಯ ಸಮೀಪ ಬಿದ್ದಿದ್ದ ಚೆಂಡು ತೆಗೆಯಲೆತ್ನಿಸಿದಾಗ ಆಯ ತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಅಜನೂರು ಸಮೀಪದ ಮಡಿಯಾನ ಎಂಬಲ್ಲಿ ನಡೆದಿದೆ. ಮೃತ ಬಾಲಕನ್ನು ಮಡಿಯಾನದ ಅಬ್ದುಲ್ಲಾರವರ ಪುತ್ರ ಸಲ್ಮಾನ್ ಎಂದು ಗುರುತಿಸಲಾಗಿದೆ.
ಬಾವಿಯ ಅರ್ಧ ಭಾಗಕ್ಕೆ ಆವರಣ ಗೋಡೆ ಕಟ್ಟಲಾಗಿದ್ದು, ಅದರ ಮೇಲೆ ಪ್ಲಾಸ್ಟಿಕ್ ನೆಟ್ ಹಾಕಲಾಗಿದೆ. ಈ ನೆಟ್ ನಲ್ಲಿ ಚೆಂಡು ಸಿಲುಕಿ ಕೊಂಡಿತ್ತು. ಈ ಚೆಂಡನ್ನು ತೆಗೆಯಲೆತ್ನಿಸಿದಾಗ ಘಟನೆ ನಡೆದಿದೆ ಎನ್ನಲಾಗಿದೆ.
ಬಾಲಕ ನಾಪತ್ತೆಯಾದುದರಿಂದ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದು, ಬಾವಿಗೆ ಹಾಕಲಾಗಿದ್ದ ಬಲೆಯ ಒಂದು ಭಾಗ ಬೇರ್ಪಟ್ಟ ಹಿನ್ನಲೆಯಲ್ಲಿ ಗಮನಿಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾಲಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತ ಪಟ್ಟಿದ್ದರು. ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.