ಮಲ್ಪೆ : ಇಲ್ಲಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟೊಂದು ಭಟ್ಕಳ ಸಮೀಪ ಮುಳುಗಡೆಗೊಂಡಿದ್ದು ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆಯ ಇಮ್ರಾನ್ ಖಾನ್ ಮಾಲೀಕತ್ವದ ಶ್ರೀ ತೇಜಸ್ ಬೋಟು ಮೇ 12ರಂದು ಮಲ್ಪೆಯಿಂದ ತೆರಳಿತ್ತು. ಮೇ 15ರಂದು ರಾತ್ರಿ 11 ಗಂಟೆಗೆ ಭಟ್ಕಳ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ತಳಭಾಗಕ್ಕೆ ಯಾವುದೋ ವಸ್ತು ತಾಗಿದಂತಾಯಿತು. ಎಂಜಿನ್ ಕೊಠಡಿಗೆ ಬಂದು ನೋಡಿದಾಗ ನೀರು ಒಳಬರುತ್ತಿರುವುದು ಕಂಡುಬಂದಿತ್ತು.
ಬೋಟಿನಲ್ಲಿದ್ದವರು ಎಷ್ಟೇ ಪ್ರಯತ್ನಪಟ್ಟರೂ ನೀರನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಮೀಪದಲ್ಲಿದ್ದ ಶ್ರೀ ಸಮುದ್ರ ಸುಂದರಿ ಬೋಟಿನವರು ಈ ಬೋಟನ್ನು ಎಳೆದು ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಎಂಟು ಮಂದಿ ಮೀನುಗಾರರನ್ನು ರಕ್ಷಿಸಿ ತಮ್ಮ ಬೋಟಿನ ಮೂಲಕ ದಡ ಸೇರಿಸಿದ್ದಾರೆ. ಬೋಟು ಸಂಪೂರ್ಣ ಮುಳುಗಡೆಗೊಂಡಿದ್ದು, ಡೀಸೆಲ್, ಬಲೆ ಇನ್ನಿತರ ವಸ್ತುಗಳನ್ನು ಸೇರಿದಂತೆ ಸುಮಾರು 85 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.