ಮಂಗಳೂರು: ಬಿಜೆಪಿಯು ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುತ್ತಿರುವ ಮೂಲಕ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂಗಳ ಮತದಿಂದ ಬಿಜೆಪಿ ಸರ್ಕಾರ ರಚಿಸಿದ್ದು, ಹಿಂದುತ್ವವನ್ನು ಗುತ್ತಿಗೆಗೆ ಪಡೆದುಕೊಂಡಿದೆ. ಆದರೆ ಇಂದು ದೇವಾಲಯಗಳನ್ನು ಧ್ವಂಸ ಮಾಡುವ ಮೂಲಕ ತಮ್ಮ ನಿಜ ರೂಪವನ್ನು ಬಯಲು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಅನಧಿಕೃತ ಧಾರ್ಮಿಕ ಕಟ್ಟಡವನ್ನು ಕೆಡವಿದ ಕುರಿತು ಮೈಸೂರು ಜಿಲ್ಲಾಡಳಿತಕ್ಕೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ. ನಿಸ್ಸಂದೇಹವಾಗಿ ದೇವಾಲಯ ಕೆಡವಿರುವುದರ ಹಿಂದೆ ಸರ್ಕಾರದ ಕೈವಾಡವಿದೆ, ಯಾವುದೇ ಉಪ ಆಯುಕ್ತರು ಮತ್ತು ತಹಶೀಲ್ದಾರ್ ಅವರು ಸರ್ಕಾರದ ಕೃಪೆ ಇಲ್ಲದೆ ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಧೈರ್ಯವಿಲ್ಲ. ಹೀಗಾಗಿ ಇದು ರಾಜಕೀಯ ಪ್ರಾಯೋಜಿತ ನಡೆಯಾಗಿದೆ ಎಂದು ಆರೋಪಿಸಿದರು.
ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಇದು ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುವ ನಾಟಕವಾಗಿದೆ. ರಾಜ್ಯದ ಜನರು ಇಂತಹ ನಾಟಕಗಳಿಂದ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ದೇವಸ್ಥಾನಗಳನ್ನು ಕೆಡವಲು ಯಾವುದೇ ಆತುರವಿಲ್ಲ ಎಂದು ಹೇಳಿದ್ದಾರೆ ಅಂದರೆ ನಿಧಾನವಾಗಿ ಅದನ್ನು ನೆಲಸಮ ಮಾಡಬೇಕೆ? ಇದು ಅವರ ಮಾತಿನ ಅರ್ಥವೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ದೇವಾಲಯ ಕೆಡವಿದರ ಬಗ್ಗೆ ಮುಖ್ಯಮಂತ್ರಿ ಕ್ಷಮೆ ಕೇಳಬೇಕು ಹಾಗೂ ದೇವಾಲಯ ನಿರ್ಮಿಸಲು ಸ್ಥಳವನ್ನು ಗುರುತಿಸಿ ಕೆಡವಲಾಗಿರುವ ದೇವಸ್ಥಾನಗಳನ್ನು ಪುನರ್ ನಿರ್ಮಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹರೀಶ್ ಕುಮಾರ್ ಹೇಳಿದರು.