ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ದ್ವಿತೀಯ ದರ್ಜೆ ಸಹಾಯಕ ಮಹಾರಾಷ್ಟ್ರ ಸರ್ಕಾರದ ಪರ ಘೋಷಣೆ ಕೂಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ದ್ವಿತೀಯ ದರ್ಜೆ ಸಹಾಯಕ ಶಿವಾಜಿ ಕಳಸೇಕರ ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದ. ಬೆಳಗಾವಿ ಮಹಾನಗರ ಪಾಲಿಕೆಯ ನೌಕರರೆಲ್ಲರೂ ಸೇರಿ ಶಿವಾಜಿ ಕಳಸೇಕರ್ಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಿವಾಜಿ ಕಳಸೇಕರ್ ದಂಪತಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಸೇರಿ ಹಲವು ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆ ದ್ವಿತೀಯ ದರ್ಜೆ ಸಹಾಯ ಶಿವಾಜಿ ಕಳಸೇಕರ್ ತಮ್ಮ ಭಾಷಣದ ಕೊನೆಯಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಈ ವಿಷಯ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಗಮನಕ್ಕೆ ಬಂದ ಬಳಿಕ ನಾಡದ್ರೋಹಿ ಘೋಷಣೆ ಕೂಗಿದ ಎಸ್ ಡಿಎ ಶಿವಾಜಿಗೆ ನೋಟಿಸ್ ನೀಡಿ ಕ್ಷಮಾಪಣೆ ಹೇಳಲು ತಿಳಿಸಬೇಕು. ಕ್ಷಮಾಪಣೆ ಕೇಳುವವರೆಗೂ ಪಿಂಚಣಿ ತಡೆಹಿಡಿಯಲು ಆಗ್ರಹಿಸಿದ್ದರು.
ಕೊನೆಗೆ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಶಿವಾಜಿ ಕಳಸೇಕರ್ ಮಹಾನಗರ ಪಾಲಿಕೆ ಆಯುಕ್ತರಿಗೆ ಕ್ಷಮಾಪಣೆ ಪತ್ರ ಬರೆದಿದ್ದಾರೆ. ‘ಮೇ 31ರಂದು ನನ್ನ ಸೇವಾನಿವೃತ್ತಿ ವೇಳೆ ತಾವೆಲ್ಲ ಆತ್ಮೀಯವಾಗಿ ನನ್ನ ಬೀಳ್ಕೊಟ್ಟಿದ್ದೀರಿ. ಈ ವೇಳೆ ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಾಗ ಭಾಷಣ ಮುಕ್ತಾಯ ವೇಳೆ ನನಗೆ ಅರಿವಿಲ್ಲದೇ ಬಾಯಿತಪ್ಪಿನಿಂದ ಆದ ಪ್ರಮಾದಕ್ಕೆ ಪಾಲಿಕೆಗೆ ಕೆಟ್ಟು ಹೆಸರು ಬರಬಹುದು. ನನ್ನಿಂದ ಆದ ಪ್ರಮಾದಕ್ಕೆ ಕ್ಷಮಾಪಣೆ ಕೋರುತ್ತೇನೆ’ ಎಂದು ಪತ್ರ ಬರೆದಿದ್ದಾರೆ. ಏನೇ ಆದ್ರೂ ಗಡಿಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮಿತಿಮೀರುತ್ತಿರುವ ವೇಳೆ ಈ ರೀತಿ ನಾಡದ್ರೋಹಿ ಘೋಷಣೆ ಕೂಗಿದ ಮಹಾನಗರ ಪಾಲಿಕೆಯ ನೌಕರನ ನಡೆ ಅಕ್ಷಮ್ಯ ಅಪರಾಧವೇ ಸರಿ