ನೋಯ್ಡಾ: ಆರ್ಡರ್ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾಗಿರುವ ವ್ಯಕ್ತಿಯನ್ನು ಸುನೀಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ.ಅವರು ಗ್ರೇಟರ್ ನೋಯ್ಡಾದ ಮಿತ್ರ ಸೊಸೈಟಿಯಲ್ಲಿ ‘ಜಾಮ್ ಜಾಮ್’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು. ಚಿಕನ್ ಬಿರಿಯಾನಿ ಮತ್ತು ಪುರಿ ಸಬ್ಜಿ ಆರ್ಡರ್ ಸಂಗ್ರಹಿಸಲು ಸ್ವಿಗ್ಗಿ ಡೆಲಿವರಿ ಬಾಯ್ ಬುಧವಾರ ಬೆಳಗ್ಗೆ ರೆಸ್ಟೋರೆಂಟ್ಗೆ ಬಂದಿದ್ದರು. ಚಿಕನ್ ಬಿರಿಯಾನಿ ಆರ್ಡರ್ ಸಿದ್ಧವಾಗಿದೆ, ಪೂರಿ ಸಬ್ಜಿ ನೀಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಅಲ್ಲಿವರೆಗೂ ಕಾಯಿರಿ ಅಂತಾ ರೆಸ್ಟೋರೆಂಟ್ ಕೆಲಸಗಾರ ಹೇಳಿದ್ದಾನೆ.
ಇದರಿಂದ ಕೋಪಗೊಂಡ ಡೆಲಿವರಿ ಬಾಯ್ ಕೆಲಸಗಾರನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಆರ್ಡರ್ ನನಗೆ ಈಗಲೇ ಬೇಕು ಅಂತಾ ಗಲಾಟೆ ಮಾಡಿದ್ದಾನೆ. ಇದಲ್ಲದೆ ಕೆಲಸಗಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಜಗಳ ಬಿಡಿಸಲು ಸುನಿಲ್ ಮಧ್ಯಪ್ರವೇಶಿಸಿದ್ದಾರೆ. ಕೂಡಲೇ ತನ್ನ ಬಳಿ ಇದ್ದ ಗನ್ ನಿಂದ ಸುನಿಲ್ ಅವರ ತಲೆಗೆ ಗುಂಡು ಹಾರಿಸಿದ ಆರೋಪಿ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿದ್ದ ಸುನಿಲ್ ಅವರನ್ನು ಯಥಾರ್ಥ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಸುನಿಲ್ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.


