ಭಟ್ಕಳ: ತಾಲೂಕಿನ ವಿವಿಧ ಭಾಗದಲ್ಲಿ ಅನ್ಯಕೋಮಿನ ಯುವಕರ ಗುಂಪು ಬೈಕ್ ಮೇಲೆ ಬಂದು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮೊಟ್ಟೆ ಬಿಸಾಕಿ ವಿಕೃತಿ ಮೆರೆದಿರುವ ಘಟನೆ ತಾಲೂಕಿನ ಪುರವರ್ಗ ಹಾಗೂ ಹನುಮಾನ್ ನಗರದಲ್ಲಿ ನಿನ್ನೆ ನಡೆದಿದೆ.
ಈ ವೇಳೆ ಓರ್ವ ಆರೋಪಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರದಲ್ಲಿ ಮೊದಲು ಮೂರು ಬೈಕ್ ಮೇಲೆ ಬಂದ ಆರು ಮಂದಿ ಅನ್ಯ ಕೋಮಿನ ಅಪ್ರಾಪ್ತ ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವನ ಮೇಲೆ ಮೊಟ್ಟೆ ದಾಳಿ ಮಾಡಿ ಅಲ್ಲಿಂದ ಪರಾರಿಯಾದ್ರು. ನಂತರ ಅದೇ ಯುವಕರು ಹನುಮಾನ ನಗರದಲ್ಲಿ ಊಟ ಮಾಡಿಕೊಂಡು ರಾತ್ರಿ ವಾಕಿಂಗ್ ಮಾಡುತ್ತಿದ್ದ ರಿಕ್ಷಾ ಚಾಲಕ ಕೃಷ್ಣಾ (50) ಅವರ ಎದೆ ಭಾಗಕ್ಕೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ನಂತರ ಅಲ್ಲಿಂದ ಕಾಲ್ಕಿತ್ತ ಯುವಕರು ತಾಲ್ಲೂಕಿನ ಪುರವರ್ಗದಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮನೆ ಪಕ್ಕದಲ್ಲಿದ್ದ ಬೇಕರಿಗೆ ಹೋಗಿ ಬರುತ್ತಿದ್ದ ಮಂಜುನಾಥ್ (29) ಎಂಬ ಯುವಕನ ಮೇಲೆ ಮತ್ತೆ ಮೊಟ್ಟೆಯಿಂದ ಹಲ್ಲೆ ನಡೆಸಿದ್ದಾರೆ.
ಇದನ್ನು ಗಮನಿಸಿದ ಹಲ್ಲೆಗೊಳಗಾದ ಯುವಕನ ಸಹೋದರ ತಕ್ಷಣಕ್ಕೆ ತನ್ನ ಕಾರನ್ನು ತೆಗೆದುಕೊಂಡು ಮೂರು ಬೈಕನ್ನು ಹಿಂಬಾಲಿಸಿದ್ದಾನೆ. ನಂತರ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಸಮೀಪ ಇಬ್ಬರು ಯುವಕರನ್ನು ಹಿಂಬಾಲಿಸಿ ಹಿಡಿಯಲು ಯಶಸ್ವಿಯಾಗಿದ್ದಾನೆ. ಆದರೆ, ಸಾರ್ವಜನಿಕರು ಜಮಾಯಿಸುವಷ್ಟರಲ್ಲಿ ಓರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಸಿಕ್ಕಿಬಿದ್ದ ಇನ್ನೋರ್ವ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸರು ಸ್ಥಿತಿಯನ್ನು ಹತೋಟಿಗೆ ತಂದು ಸಿಕ್ಕಿಬಿದ್ದ ಓರ್ವ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಉಳಿದೆಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಠಾಣೆಯ ಮೆಟ್ಟಿಲೇರಿದ್ದರು. ಬಳಿಕ ಸ್ಥಳಕ್ಕೆ ಕೆಎಸ್ ಆರ್ಪಿ ತುಕಡಿಯನ್ನು ಕರೆದು ಆಕ್ರೋಶಗೊಂಡ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪ್ರಕರಣ ಸಂಬಂಧಿಸಿ ಈವರೆಗೆ ಸದ್ಯಕ್ಕೆ ಒಟ್ಟು ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಮೂವರು ಪಿಯುಸಿ ಪರೀಕ್ಷೆ ಬರೆದ ಬಳಿಕ ಅವರನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ. ಘಟನೆಯ ಬಳಿಕ ತಾಲೂಕಿನಾದ್ಯಂತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್ಪಿ ಬೆಳ್ಳಿಯಪ್ಪ ತಿಳಿಸಿದ್ದಾರೆ.