ನವದೆಹಲಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ನೆರೆಯ ನೇಪಾಳ ಹಾಗೂ ಶ್ರೀಲಂಕಾದೊಂದಿಗೆ ಹೋಲಿಕೆ ಮಾಡುವ ಮೂಲಕ ಸ್ವಪಕ್ಷದ ವಿರುದ್ಧ ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಿಡಿಕಾರಿದ್ದಾರೆ.
ಸೀತೆಯ ನೇಪಾಳ, ರಾವಣನ ಲಂಕಾಗಿಂತಲೂ ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಏರುಗತಿಯಲ್ಲಿ ಸಾಗಿದೆ ಎಂದು ಸುಬ್ರಮಣಿಯನ್ ಟೀಕಿಸಿದ್ದಾರೆ. ಸುಬ್ರಮಣಿಯನ್ ಟ್ವೀಟ್ ನಲ್ಲಿ, ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 93 ರೂ. ಇದೆ. ಸೀತೆಯ ನೇಪಾಳದಲ್ಲಿ 53 ಮತ್ತು ರಾವಣನ ಲಂಕಾದಲ್ಲಿ 51 ರೂಪಾಯಿ ಇದೆ ಎಂದಿದೆ.
ನಿನ್ನೆ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್ ಮೇಲೆ 2.5 ರೂಪಾಯಿ ಮತ್ತು ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಮೂಲ ಸೌಕರ್ಯ ಸೆಸ್ ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೆ ಸುಬ್ರಮಣಿಯನ್ ಸ್ವಾಮಿ ಈ ರೀತಿ ಟ್ವೀಟ್ ಮಾಡಿ ಸ್ವಪಕ್ಷವನ್ನ ಟೀಕಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ದೇಶಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಇದೀಗ ಸ್ವಪಕ್ಷೀಯ ನಾಯಕರೂ ಕಿಡಿಕಾರಿದ್ದಾರೆ.