ಚಿತ್ರದುರ್ಗ: ಇದು ಮಠದ ಒಳಗಿನ ಪಿತೂರಿಯಾಗಿದೆ. ಹಲವು ದಿನಗಳಿಂದ ನಡೆಯುತ್ತಿದ್ದಂತ ಪಿತೂರಿ ಈಗ ಹೊರಗೆ ಬಂದಿದೆ. ಈ ಹಿಂದಿನಿಂದಲು ನಡೆಯುತ್ತಿದ್ದಂತ ಷಡ್ಯಂತ್ರವಾಗಿದೆ. ಯಾರೂ ಆತಂಕ ಪಡೋ ಅಗತ್ಯವಿಲ್ಲ. ಈ ಪ್ರಕರಣದಿಂದ ಮುಕ್ತವಾಗಿ ಬರುವೆ ಎಂಬುದಾಗಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರು ಭಕ್ತರಿಗೆ ಭರವಸೆ ನೀಡಿದ್ದಾರೆ.
ಮಠಕ್ಕೆ ಆಗಮಿಸಿದ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿಮಾನಿಗಳೇ ಇವತ್ತು ಮುರುಘಾ ಶರಣರ ನೋವು, ತಮ್ಮ ನೋವು ಎಂದು ಭಾವಿಸುತ್ತಿದ್ದಾರೋ ಅವರಿಗೆ ಧನ್ಯವಾದಗಳು. ನಾವೆಲ್ಲಾ ಇದ್ದೇವೆ ಎಂಬುದಾಗಿ ಧೈರ್ಯ ಹೇಳುತ್ತಿದ್ದೀರಿ. ಬಂಧಿರುವಂತ ಕಷ್ಟವನ್ನು ಧೈರ್ಯವನ್ನು, ಬುದ್ಧಿವಂತಿಕೆಯಿಂದ ಎಲ್ಲರೂ ಸಾಂಘಿಕವಾಗಿ ಎದುರಿಸೋ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೊಂದು ಶಾಶ್ವತವಾದಂತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಇದು ಹೊಸದೇನಲ್ಲ. ಮಠದ ಒಳಗಡೇ ನಡೆಯುತ್ತಿರುವಂತ ಪಿತೂರಿಯಾಗಿದೆ. ಹಲವು ವರ್ಷಗಳಿಂದ ಈ ಷಡ್ಯಂತ್ರ ನಡೆಸಲಾಗುತ್ತಿದೆ. ಯಾವುದೇ ಪ್ರಕರಣವಾದ್ರೂ ಅಂತಿಮವಾದಂತ ತಾರ್ಕಿಕ ಅಂತ್ಯವಿದೆ. ಆ ತಾರ್ಕಿಕ ಅಂತ್ಯವನ್ನು ಕಾಣುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ನಾವು ಈ ನೆಲದ ಕಾನೂನನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಾನೂನನ್ನು ಗೌರವಿಸೋ ಮಠಾಧೀಶರಾಗಿದ್ದೇವೆ. ಆ ಗೌರವನ್ನು ನಾನು ಕೂಡ ಮಾಡುತ್ತೇನೆ. ಕಾನೂನು ಗೌರವಿಸುತ್ತಾ ಪ್ರಕರಣ ಸಂಬಂಧದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಫಲಾಯನವಿಲ್ಲ ಎಂದು ಹೇಳಿದರು.
ಅಭಿಮಾನಿಗಳು ಯಾವುದೇ ರೀತಿಯ ಊಹಾಪೋಹಗಳು, ಗಾಳಿ ಸುದ್ದಿಗಳನ್ನು ನಂಬಬಾರದು. ನಾವುಗಳು ನ್ಯಾಯದ ಸ್ಥಾನದಲ್ಲಿದ್ದೇವೆ. ಮುರುಘಾ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿ ಕಾರ್ಯ ಮಾಡಿದೆ. ಎಲ್ಲಾ ವರ್ಗದವರಿಗೂ ಮಠವು ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡು ಬಂದಿದೆ. ಏನೋ ಅಹಿತಕರ ಘಟನೆ ನಡೆದಿದೆ. ನಾವು ಅದರಿಂದ ಹೊರಗಡೆ ಬಂದೇ ಬರುತ್ತೇವೆ ಎಂದರು.