ನವದೆಹಲಿ: ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. 2018ರ ಪ್ರಕರಣವೊಂದ್ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರ್ನಬ್ ಗೋಸ್ವಾಮಿಯನ್ನ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.
ಬಿ-ರಿಪೋರ್ಟ್ ಸಲ್ಲಿಸಲಾಗಿದ್ದ ಪ್ರಕರಣವನ್ನ ರಿ-ಓಪನ್ ಮಾಡಿ ತಮ್ಮನ್ನ ಬಂಧಿಸಿದ್ದನ್ನ ಪ್ರಶ್ನಿಸಿ ಅರ್ನಬ್ ಮುಂಬೈ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ಕೋರ್ಟ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅರ್ನಬ್ , ತಮಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ನಬ್ ಗೋಸ್ವಾಮಿಗೆ ಜಾಮೀನು ಮಂಜೂರು ಮಾಡಿದೆ.
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣದಡಡಿ ನ.4 ರಂದು ಅರ್ನಬ್ ಮತ್ತು ಇತರ ಇಬ್ಬರನ್ನು ಅಲಿಬಾಗ್ ಪೊಲೀಸರು ಬಂಧಿಸಿದ್ದರು.
ಮಹಾರಾಷ್ಟ್ರದ ಅಲಿಬಾಗ್ನ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದಾ ನಾಯಕ್ ಅವರು 2018ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸ್ಥಳದಲ್ಲಿ ಪೊಲೀಸರಿಗೆ ದೊರೆತಿದ್ದ ಪತ್ರದಲ್ಲಿ, ‘ತಮಗೆ ಪಾವತಿಸಬೇಕಿದ್ದ ₹5.40 ಕೋಟಿ ಹಣವನ್ನು ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಪಾವತಿಸಿಲ್ಲ. ಆ ಕಾರಣ ನಮ್ಮ ಕುಟುಂಬ ತೀವ್ರ ಆರ್ಥಿಕ ತೊಂದರೆಗೆ ಒಳಗಾಯಿತು’ ಎಂದು ಅನ್ವಯ್ ನಾಯಕ್ ಬರೆದುಕೊಂಡಿದ್ದರು.