ಸುಳ್ಯ: ಕಳೆದ ಗುರುವಾರ ನಡೆದ ಸಂಪಾಜೆ ನಿವಾಸಿ ಸಂಪತ್ ಕುಮಾರ್ ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಳ್ಯ ತಾಲೂಕಿನ ಕಲ್ಲುಗುಂಡಿ ನಿವಾಸಿಗಳಾದ ಮನು, ಬಿಪಿನ್ , ಕಾರ್ತಿಕ್ ,ಮಧು ಹಾಗೂ ಶಿಶಿರ್ ಎಂದು ಗುರುತಿಸಲಾಗಿದೆ. ಸುಳ್ಯ ಸಿಪಿಐ ನವೀನ್ ಚಂದ್ರ ಜೋಗಿ ಅವರ ನೇತೃತ್ವದಲ್ಲಿ ಪಿಎಸ್ಐ ಹರೀಶ್ ತಂಡದವರು ಕೊಲೆ ಪ್ರಕರಣದ ಜಾಡು ಹಿಡಿದು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತ ಆರೋಪಿಗಳು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಎಂಬಲ್ಲಿ ಸುಬ್ರಹ್ಮಣ್ಯ-ಬಿಸ್ಲೆ ಘಾಟ್ ರಸ್ತೆಯಲ್ಲಿ ಸ್ವಿಫ್ಟ್ ಕಾರಿನಲ್ಲಿ(KA12MA4385) ರಲ್ಲಿ ತಲೆಮರೆಸಿಕೊಳ್ಳಲು ತೆರಳುತ್ತಿದ್ದಾಗ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಕ್ವಾಲಿಸ್ (KA19MF0789) ವಶಪಡಿಸಿ ಕೊಲೆ ಮಾಡಲು ಉಪಯೋಗಿಸಿದ ಮೂರು ಬಂದೂಕು, ಒಂದು ಕತ್ತಿ, ಒಂದು ಚೂರಿ ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಕೊಲೆ ಮಾಡಿದ ದ್ವೇಷಕ್ಕಾಗಿ ಸಂಪತ್ ಕುಮಾರ್ ನನ್ನು ಕೊಲೆ ಕೃತ್ಯ ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಏನಿದು ಪ್ರಕರಣ:
ಸುಳ್ಯ ಶಾಂತಿನಗರದಲ್ಲಿ ಕಳೆದ ಗುರುವಾರ ಬೆಳಿಗ್ಗೆ ಗುಂಡು ಹಾರಾಟ ಪ್ರಕರಣ ನಡೆದಿದ್ದು, ಸಂಪತ್ ಕುಮಾರ್ ( 35) ಎಂಬವರನ್ನು ಕೊಲೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಸಂಪತ್ ಕುಮಾರ್ ಮೃತಪಟ್ಟಿದ್ದರು. ಮುಂಜಾನೆ ಸಂಪತ್ ಮನೆಯ ಮುಂದೆ ಕಾರಿನಲ್ಲಿ ಬಂದು ಆಗಂತುಕರು ಗುಂಡು ಹಾರಿಸಿ ಪರಾರಿಯಾಗಿದ್ದರು. ಸಂಪತ್ ಅವರು ಮನೆ ಯಿಂದ ಕಾರಿನಲ್ಲಿ ಹೊರಡುವಷ್ಟರಲ್ಲಿ ಗುಂಡಿನ ದಾಳಿ ನಡೆದಿತ್ತು. ಕಾರಿನ ಗಾಜಿಗೆ ಗುಂಡೇಟು ಬಿದ್ದ ಕೂಡಲೇ ಸಂಪತ್ ಕಾರಿನಿಂದ ಇಳಿದು ಪಕ್ಕದ ಇನ್ನೊಂದು ಮನೆಯತ್ತ ಓಡಿದ್ದರು.. ಆದರೆ ದುಷ್ಕರ್ಮಿಗಳು ಬೆನ್ನಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದರು.
ಕೊಲೆಯಾದ ಸಂಪತ್ ಯಾರು?
ಕೊಲೆಯಾದ ಸಂಪತ್ ಕುಮಾರ್ ಮೂಲತ ಸಂಪಾಜೆ ನಿವಾಸಿಯಾಗಿದ್ದು ಕೊಡಗು ಜಿಲ್ಲೆಯ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರ ಹತ್ಯೆಯಲ್ಲಿ ಕೊಲೆ ಆರೋಪಿಯಾಗಿದ್ದು ಇತ್ತಿಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಸಂಪತ್ ಮರಳು ಸಾಗಾಟ ಹಾಗೂ ಇತರ ಅಕ್ರಮ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಇದನ್ನು ಬಾಲಚಂದ್ರ ಕಳಗಿ ವಿರೋಧಿಸಿದ ಹಿನ್ನಲೆಯಲ್ಲಿ ಬಾಲಚಂದ್ರ ಕಳಗಿಯವರನ್ನು ಸುಪಾರಿ ನೀಡಿ ಕೊಲೆ ನಡೆಸಲಾಗಿತ್ತು ಎಂಬ ಅರೋಪ ಕೇಳಿ ಬಂದಿತ್ತು.