Monday, April 29, 2024
Homeತಾಜಾ ಸುದ್ದಿಬೆಂಗಳೂರಿನ ಶಾಲೆಯೊಂದರಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಚೆನ್ನೈನಲ್ಲಿ 20 ದಿನಗಳ ಬಳಿಕ ಪತ್ತೆ: ಹೆತ್ತವರ ಪ್ರೀತಿ ಸಿಗದೇ...

ಬೆಂಗಳೂರಿನ ಶಾಲೆಯೊಂದರಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಚೆನ್ನೈನಲ್ಲಿ 20 ದಿನಗಳ ಬಳಿಕ ಪತ್ತೆ: ಹೆತ್ತವರ ಪ್ರೀತಿ ಸಿಗದೇ ಪರಸ್ಪರ ವಿವಾಹವಾಗಲು ನಿರ್ಧರಿಸಿದ ಬಾಲಕಿಯರು; ಪೋಷಕರು ಓದಲೇ ಬೇಕಾದ ಸ್ಟೋರಿಯಿದು…

spot_img
- Advertisement -
- Advertisement -

ಬೆಂಗಳೂರು: 20 ದಿನಗಳ ಹಿಂದೆ ಬೆಂಗಳೂರಿನ ಶಾಲೆಯೊಂದರಿಂದ ನಾಪತ್ತೆಯಾಗಿದ್ದ ಮೂವರು ಬಾಲಕಿಯರು ಕೊನೆಗೂ ಪತ್ತೆಯಾಗಿದ್ದಾರೆ. ನಿಜಕ್ಕೂ ಬಾಲಕಿಯರ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ. ಹೆತ್ತವರು ಮಕ್ಕಳಿಗೆ ಸರಿಯಾದ ಪ್ರೀತಿ ತೋರಿಸದೇ ಇದ್ರೆ ಏನಾಗುತ್ತೆ ಎಂಬುವುದಕ್ಕೆ ಇದೇ ಉತ್ತಮ ಉದಾಹರಣೆ…

ಬೆಂಗಳೂರಿನ ಪೂರ್ವ ವಲಯದ ಖಾಸಗಿ ಶಾಲೆಯಲ್ಲಿ ಮೂವರು ವಿದ್ಯಾಥಿರ್ನಿಯರು 9 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಶಾಲಾ ಹಾಸ್ಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೊಬ್ಬ ಬಾಲಕಿ ಮನೆಯಿಂದಲೇ ಶಾಲೆಗೆ ಬಂದು ಹೋಗುತ್ತಿದ್ದಳು. ಒಬ್ಬಾಕೆಗೆ ತಂದೆ-ತಾಯಿ ಇರಲಿಲ್ಲ. 9ನೇ ತರಗತಿ ಓದುತ್ತಿದ್ದ ಮತ್ತೊರ್ವ ಬಾಲಕಿಗೆ ತಾಯಿ ಇರಲಿಲ್ಲ. ತಂದೆ ಇದ್ದು, ಆತ 2ನೇ ಮದುವೆಯಾಗಿದ್ದ. ಪಾಲಕರ ಜತೆ ನೆಲೆಸಿದ್ದ ಬಾಲಕಿಗೆ ತಾಯಿ ಪ್ರೀತಿ ತೋರಿಸಿದರೆ, ತಂದೆ ಹೆಚ್ಚು ಶಿಸ್ತು ಜೀವನ ನಡೆಸುವಂತೆ ಒತ್ತಡ ಹೇರುತ್ತಿದ್ದರು.

ಮೂವರು ಒಂದಿಲ್ಲೊಂದು ಕಾರಣಕ್ಕೆ ಮಾನಸಿಕ ಹಿಂಸೆಗೆ ಒಳಗಾಗಿದ್ದು, ಇವರಲ್ಲಿಯೇ ಪರಸ್ಪರ ಸ್ನೇಹ ಬೆಳೆದು ಮನೆಯಿಂದ ದೂರ ಇರಲು ನಿರ್ಧರಿಸಿದ್ದರು. ಅದಕ್ಕಾಗಿ ಬಾಲಕಿಯರು ಮನೆಯಲ್ಲಿ ಕಷ್ಟವಿದೆ ಎಂದು ಸ್ನೇಹಿತೆಯರು ಮತ್ತು ಪರಿಚಯಸ್ಥರಿಂದ 30 ಸಾವಿರ ರೂ. ಸಂಗ್ರಹಿಸಿದ್ದರು. ತಮ್ಮ ಪಕ್ಕಾ ಪ್ಲ್ಯಾನ್ ನಂತೆ ಸೆ.6ರ ಮಧ್ಯಾಹ್ನ ಹಾಸ್ಟೆಲ್​ ವಾರ್ಡನ್​ ಮತ್ತು ಸೆಕ್ಯೂರಿಟಿ ಕಣ್ತಪ್ಪಿಸಿ ಲಗೇಜ್​ ಸಮೇತ ಪರಾರಿಯಾಗಿದ್ದರು. ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿ ಕೂಡಿಕೊಂಡು ಆಟೋದಲ್ಲಿ ಫಾಲಸೇವಾನಗರಕ್ಕೆ ತೆರಳಿದ್ದರು. ಅಂಗಡಿಯಲ್ಲಿ ಬಟ್ಟೆ ಖರೀದಿಸಿ ಕಂಟ್ಮೋನೆಂಟ್​ ರೈಲು ನಿಲ್ದಾಣ ಮಾರ್ಗವಾಗಿ ವೆಲಾಂಗಣಿ ತೆರಳಲು ನಿರ್ಧರಿಸಿದ್ದರು. ಗೊತ್ತಾಗದೆ ಚೆನ್ನೈ ರೈಲು ಹತ್ತಿ ಸೆ.7ರಂದು ಇಳಿದಿದ್ದಾರೆ. ಚೆನ್ನೈ ರೈಲು ನಿಲ್ದಾಣದಲ್ಲಿ ಸಂಜೆವರೆಗೂ ಕಾಲ ಕಳೆದಿದ್ದಾರೆ.

ಚೆನ್ನೈ ರೈಲು ನಿಲ್ದಾಣದಲ್ಲಿ ಸಂಶಯಸ್ಪದಾವಗಿ ಓಡಾಡುತ್ತಿದ್ದ ಬಾಲಕಿಯರನ್ನು ಕಂಡ ರೈಲ್ವೆ ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಬಾಲಕಿಯರು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದಾಗ ಪೊಲೀಸರು ಬೆಂಗಳೂರು ರೈಲು ಹತ್ತಿಸಿದ್ದಾರೆ. ಮತ್ತೊಂದೆಡೆ ಮಕ್ಕಳು ಕಾಣೆ ಆಗಿರುವುದಾಗಿ ಪಾಲಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲೆಡೆ ಹುಡುಕಾಟ ಶುರು ಮಾಡಿದ್ದರು.

ಕಂಟ್ಮೋನೆಂಟ್​ ರೈಲು ನಿಲ್ದಾಣಕ್ಕೆ ಬಂದ ಬಾಲಕಿಯರು ಪೊಲೀಸರು ಕಾಣೆಯಾಗಿರುವ ತಮ್ಮ ಭಾವಚಿತ್ರಗಳನ್ನು ಅಂಟಿಸಿದ್ದ ಪ್ರಕಟಣೆ ಗಮನಿಸಿ ವಾಪಸ್​ ಚೆನ್ನೈಗೆ ತೆರಳಲು ನಿರ್ಧರಿಸಿ ಗೊತ್ತಾಗದೆ ದೆಹಲಿ ರೈಲಿಗೆ ಹತ್ತಿದ್ದಾರೆ. ಮಾರ್ಗಮಧ್ಯೆ ಮಾರ್ಗ ಬದಲಾಯಿಸಿ ಚೆನ್ನೈಗೆ ಹೋಗಿದ್ದಾರೆ. ಬ್ಯಾಗ್​ನಿಂದ ಹಣ ತೆಗೆಯುತ್ತಿದ್ದ ದೃಶ್ಯ ನೋಡಿದ ಕಳ್ಳರು, ಹಣ ಸಮೇತ ಬ್ಯಾಗ್​ ಕಳವು ಮಾಡಿದ್ದರು. ಚೆನ್ನೈನಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದ ಬಾಲಕಿಯರನ್ನು ಕರೆದು ಆಟೋ ಚಾಲಕ ಪ್ರಶ್ನಿಸಿದ್ದ. ಅದಕ್ಕೆ ತಮಿಳು ಬಲ್ಲ ವಿದ್ಯಾಥಿರ್ನಿಯರು ‘ಅನಾಥರು. ಹಾಸ್ಟೆಲ್​ನಲ್ಲಿ ಹಿಂಸೆ ಕೊಡುತ್ತಿದ್ದರು. ಅದಕ್ಕೆ ಹೊರಗೆ ಬಂದಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದರು. ಆಟೋ ಚಾಲಕ, ಹೆಣ್ಣು ಮಕ್ಕಳನ್ನು ಚರ್ಚ್​ ನಡೆಸುತ್ತಿದ್ದ ಅನಾಥಾಲಯಕ್ಕೆ ಸೇರಿಸಿ ಮಿಕ್ಸಿ ತಯಾರಿಸುವ ಘಟಕಕ್ಕೆ ಕೆಲಸಕ್ಕೆ ಸೇರಿಸಿದ್ದ.

ಇದರ ಮಧ್ಯೆ ಮೂವರು ಬಾಲಕಿಯರು ಒಂದು ಮೊಬೈಲ್ ​ಫೋನ್​ ಖರೀದಿಸಿದ್ದರು. ಅದರಲ್ಲಿ ಒಬ್ಬಾಕೆ, ತಂದೆಗೆ ಮಿಸ್ಡ್​​ ಕಾಲ್​ ಕೊಟ್ಟಿದ್ದಳು. ವಾಪಸ್​ ತಂದೆ ಕರೆ ಮಾಡಿದಾಗ ಸ್ವೀಕರಿಸುತ್ತಿರಲಿಲ್ಲ. ಅನುಮಾನ ಬಂದು ಈ ವಿಷಯವನ್ನು ಪಾಲಕರು, ಪೊಲೀಸರಿಗೆ ತಿಳಿಸಿದ್ದರು. ಕರೆಯ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತಂದಿದ್ದಾರೆ.

ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದ ಬಾಲಕಿಯರು: ಹೆತ್ತವರ ಪ್ರೀತಿಯಿಂದ ವಂಚಿತರಾಗಿದ್ದ ಮೂವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪರಸ್ಪರ ಮದುವೆ ಆಗಲು ನಿರ್ಧರಿಸಿದ್ದರು. ಅಲ್ಲದೆ, ಬಡ ಹೆಣ್ಣು ಮಕ್ಕಳನ್ನು ಯಾರು ಪ್ರೀತಿಸುತ್ತಾರೆ? ಯಾರು ಮದುವೆ ಮಾಡುತ್ತಾರೆ? ಎಂದು ಮಾನಸಿಕವಾಗಿ ಕುಗ್ಗಿದ್ದರು. ಅದಕ್ಕಾಗಿ ಒಬ್ಬಾಕೆ, ಹುಡುಗನಂತೆ ಕೂದಲು ಕಟಿಂಗ್​ ಮಾಡಿಸಿಕೊಂಡು ಪುರುಷರ ಉಡುಪು ಧರಿಸಿಕೊಳ್ಳುತ್ತಿದ್ದಳು. ಮತ್ತೋರ್ವ ಬಾಲಕಿ, ಆಕೆಯ ಪತ್ನಿಯ ರೀತಿ ನಡೆದುಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ.

ಇನ್ನು ಮೂವರ ಪೈಕಿ ಒಬ್ಬಾಕೆಗೆ ಚಿಕ್ಕ ವಯಸ್ಸಿನಲ್ಲಿಯೇ ತಾಯಿ ಮೃತಪಟ್ಟಿದ್ದರು. ಮಗಳಿಗೆ ಗೊತ್ತಾಗದಂತೆ ತಂದೆ 2ನೇ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳು ಇದ್ದಾರೆ. ಹಾಸ್ಟೆಲ್​ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೂ ಮತ್ತು ಮಲತಾಯಿಯ ಗಂಡು ಮಕ್ಕಳಿಗೆ ಪರಸ್ಪರ ಪರಿಚಯ ಆಗಿದೆ. ಕುಪಿತಗೊಂಡ ಗಂಡು ಮಕ್ಕಳು, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಇದರ ನಡುವೆ ಚರ್ಚ್​ಗೆ ಬಾಲಕಿ ಪ್ರಾರ್ಥನೆಗೆ ಹೋದಾಗ ಜ್ಯೋತಿಷಿಯೊಬ್ಬ, ನಿನಗೆ ಸಂಕಷ್ಟ ಎದುರಾಗಲಿದೆ. ಕೊಲೆ ಆಗುತ್ತೀಯ ಎಂದು ಭವಿಷ್ಯ ನುಡಿದಿದ್ದ. ಇದರಿಂದ ಮತ್ತಷ್ಟು ಭಯಗೊಂಡು ಮನೆ ತೊರೆಯಲು ನಿರ್ಧರಿಸಿದ್ದಳು ಎನ್ನಲಾಗಿದೆ. ಮನೆ ವಾತಾವರಣ ಮಕ್ಕಳ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಹೆತ್ತವರು ಮಕ್ಕಳ ಜೊತೆ ಸರಿಯಾದ ಒಡನಾಟ ಇಟ್ಟುಕೊಂಡಿಲ್ಲ ಎಂದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್.

- Advertisement -
spot_img

Latest News

error: Content is protected !!