ಮಂಗಳೂರು : ಮಹಾಮಾರಿ ಕೊರೊನಾದಿಂದಾಗಿ ಹೆಚ್ಚಿನವರ ಬದುಕು ಬುಡಮೇಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಹೊರತೇನಲ್ಲ. ಕಾಲೇಜು ದಿನಗಳಲ್ಲಿ ಕ್ಯಾಟರಿಂಗ್, ಡೆಕೋರೇಷನ್ ಕೆಲಸ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿ ಹಣ ಸಂಪಾದಿಸುತ್ತಿದ್ದ ವಿದ್ಯಾರ್ಥಿಗಳು, ಇದೀಗ ನೇರಳೆ ಹಣ್ಣಿನ ವ್ಯಾಪಾರಕ್ಕಿಳಿದು ಸೈ ಎನಿಸಿಕೊಂಡಿದ್ದಾರೆ.
ಹೌದು. ತಾವೂ ದುಡಿದ ಹಣದಲ್ಲೇ ತಮ್ಮ ಕಾಲೇಜೂ ಫೀಸ್ ಹಾಗೂ ಶೈಕ್ಷಣಿಕ ಖರ್ಚನ್ನು ಬರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಈ ಕೊರೋನಾದಿಂದಾಗಿ ಕೆಲಸ ಕಾರ್ಯ ಕಮ್ಮಿ ಆಗಿತ್ತು. ಇದಕ್ಕಾಗಿ ಮಂಗಳೂರಿನ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡವೊಂದು ನಗರದಲ್ಲಿ ನೇರಳೆ ಹಣ್ಣಿನ ವ್ಯಾಪಾರ ನಡೆಸಿ ಭೇಷ್ ಎನಿಸಿಕೊಂಡಿದ್ದಾರೆ.
ಈ ಬಾರಿಯ ಲಾಕ್ಡೌನ್ ಶುರುವಾದಾಗಿನಿಂದಲೂ ಮಂಗಳೂರಿನಲ್ಲಿ ಕಲಿಯುತ್ತಿರುವ ಕಾಲೇಜು ಹುಡುಗರು ಈ ಕೆಲಸದಲ್ಲಿ ತೊಡಗಿದ್ದಾರೆ.ಮಂಗಳೂರಿನಲ್ಲಿ ನೇರಳೆ ಹಣ್ಣಿಗೆ ಉತ್ತಮ ಬೇಡಿಕೆಯಿದ್ದು ಪ್ರಾರಂಭದಲ್ಲಿ ಕೆಜಿಗೆ 400 ರೂ. ಬೆಲೆಯಿತ್ತು. ಸದ್ಯ ಬೆಲೆ ಕಡಿಮೆಯಾಗಿದ್ದು ಕೆಜಿ ಒಂದಕ್ಕೆ 200ರಂತೆ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವುದರಿಂದ ಹೆಚ್ಚಿನವರು ಬಂದು ಈ ಯುವಕರ ತಂಡದಿಂದ ನೇರಳೆ ಖರೀದಿ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿ ಸಂಘಕ್ಕೆ ಸತೀಶ್ ಪ್ರಭು ಎಂಬವರು ಗೋವಾ, ಆಂಧ್ರ ಪ್ರದೇಶ, ಬೆಳಗಾವಿಯಿಂದ ಈ ನೇರಳೆ ಹಣ್ಣನ್ನು ತರಿಸಿ ಕೊಡುತ್ತಿದ್ದಾರೆ.
ಕಾಲೇಜು ಶುರುವಾಗದೇ ಇದ್ದರೂ ಕೂಡ ಕಾಲೇಜು ಫೀಸ್ ಕಟ್ಟಬೇಕಾಗಿದೆ. ಹೀಗಾಗಿ ಶೈಕ್ಷಣಿಕ ಖರ್ಚಿಗಾಗಿ ಈ ವಿದ್ಯಾರ್ಥಿಗಳು ಸ್ವತ ತಾವೇ ದುಡಿದು ಹಣ ಒಟ್ಟು ಸೇರಿಸುತ್ತಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.