ಬಾಗಲಕೋಟೆ; ವಿದ್ಯಾರ್ಥಿಯೊಬ್ಬ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 6 ವಿಷಯಗಳಲ್ಲಿ ಫೇಲ್ ಆಗಿದ್ರೂ ಆತನ ಪೋಷಕರು ಕೇಕ್ ಕತ್ತರಿಸಿ ತಿನ್ನಿಸಿ ಸಂಭ್ರಮಿಸಿದ ವಿಚಿತ್ರ ಪ್ರಸಂಗ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆಯ ನವನಗರದ ಅಭಿಷೇಕ್ ನಿನ್ನೆ ಪ್ರಕಟವಾದ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಆರಕ್ಕೆ ಆರೂ ವಿಷಯಕ್ಕೆ ಅನುತ್ತೀರ್ಣನಾಗಿದ್ದ. ಬೇಸರದಲ್ಲಿದ್ದ ಅಭಿಷೇಕ್ಗೆ ಆತ್ಮಸ್ಥೈರ್ಯ ತುಂಬಲು ಪೋಷಕರು ಕೇಕ್ ತಿನ್ನಿಸಿ ಸಿಹಿ ಮುತ್ತು ನೀಡಿ ಸಮಾಧಾನ ಮಾಡಿದ್ದಾರೆ.
ಪರೀಕ್ಷೆ ಒಂದೇ ಜೀವನವಲ್ಲ, ಈಗ ಸಾಧ್ಯವಾಗದಿದ್ದರೆ ಇನ್ನೊಂದು ಪರೀಕ್ಷೆಯಲ್ಲಿ ಮರಳಿ ಪ್ರಯತ್ನ ಮಾಡು ಎಂದು ಮಗನಿಗೆ ಪೋಷಕರು ಮತ್ತು ಮನೆಯವರು ಧೈರ್ಯ ತುಂಬಿದ್ದಾರೆ. 15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ಅಭಿಷೇಕ್ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ಅಭಿಷೇಕ್ಗೆ ಸಾಧ್ಯವಾಗಿಲ್ಲ. ಫೇಲ್ ಆಗಿದ್ದರಿಂದ ಬಹಳ ಬೇಸರವಾಗಿತ್ತು. ತಂದೆ, ತಾಯಿ ಎಲ್ಲರೂ ಈಗ ಧೈರ್ಯ ತುಂಬಿದ್ದಾರೆ. ಫೇಲ್ ಆದರೂ ಧೈರ್ಯ ತುಂಬಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ನಾನು ಪರೀಕ್ಷೆಯಲ್ಲಿ ಫೇಲ್ ಆಗಿರಬಹುದು, ಜೀವನದಲ್ಲಿ ಫೇಲ್ ಆಗಲ್ಲ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗುತ್ತೇನೆ ಎಂದು ಅಭಿಷೇಕ್ ಆತ್ಮವಿಶ್ವಾಸದಿಂದ ಹೇಳಿದ್ದಾನೆ.