ಕಾರವಾರ: ಕೆರೆಯಲ್ಲಿ ಮೀನು ಸಿಗದ ಕಾರಣಕ್ಕೆ ಜನರು ರೊಚ್ಚಿಗೆದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡದಲ್ಲಿ ನಡೆದಿದೆ.
ಕಾನಗೋಡ ಗ್ರಾಮದಲ್ಲಿ ಇಂದು ಕೆರೆ ಬೇಟೆಯಲ್ಲಿ ಮೀನು ಹಿಡಿಯಲು ರಾಜ್ಯದ ವಿವಿದೆಡೆಯಿಂದ ಐದು ಸಾವಿರಕ್ಕೂ ಹೆಚ್ಚು ಮತ್ಸ್ಯಪ್ರಿಯರು ಆಗಮಿಸಿದ್ದರು.
ಮೀನು ಹಿಡಿಯಲು ಬಂದಿದ್ದವರಿಂದ ಕೆರೆ ಬೇಟೆ ಸಮಿತಿ ತಲಾ 600 ರೂಪಾಯಿ ವಸೂಲಿ ಮಾಡಿದ್ದು, ಮೀನು ಸಿಗದ ಕಾರಣ ಜನರು ಆಕ್ರೋಶಗೊಂಡಿದ್ದಾರೆ.
ಮೀನು ಸಿಗದ ಬೇಸರದಲ್ಲಿ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಿದ ಜನರು ಹಣ ವಾಪಾಸ್ ನೀಡಲು ಸಮಿತಿ ನಿರಾಕರಿಸಿದ್ದಕ್ಕೆ ಗಲಾಟೆ ನಡೆಸಿ ಸಮಿತಿಯ ಪೆಂಡಾಲ್ ಕಿತ್ತೆಸೆದು ಪೊಲೀಸರ ಮೇಲೆಯೇ ಕಲ್ಲು ತೂರಾಟಕ್ಕೆ ಯತ್ನಿಸಿದ್ದಾರೆ.
ಆಕ್ರೋಶ ಭರಿತ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಪಡೆದ ಹಣವನ್ನು ಸಮಿತಿ ವಾಪಾಸ್ ನೀಡಿದೆ.
ಈಶ್ವರ ದೇವಸ್ಥಾನದ ಅಭಿವೃದ್ದಿಗಾಗಿ ಕೆರೆ ಬೇಟೆ ಹೆಸರಿನಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಜನರಿಂದ ತಲಾ 600 ರೂಪಾಯಿ ಪಡೆಯಲಾಗಿತ್ತು
ಗಲಾಟೆಯಲ್ಲಿ ಕಲ್ಲು ತೂರಾಟವಾಗಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.