ಉಡುಪಿ: ಆರ್ ಎಸ್ ಎಸ್ ನಪುಂಸಕ ಸಂಸ್ಥೆ ಎಂದು ಹೇಳಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಗರಂ ಆಗಿದ್ದಾರೆ.
ಉಡುಪಿಯಲ್ಲಿ ಇಂದು ಹೇಳಿಕೆ ನೀಡಿರುವ ಸಚಿವ ಸುನೀಲ್ ಕುಮಾರ್, ಕಾಂಗ್ರೆಸ್ ನಾಯಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ, ರಾಷ್ಟ್ರ ಧ್ವಜದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ಸಿಗೆ ಉಳಿದಿಲ್ಲ ಎಂದು ಟೀಕಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜದ ಎದುರು ನಪುಂಸಕನಂತೆ ನಡೆದುಕೊಂಡಿದ್ದು ಕಾಂಗ್ರೆಸ್ ಎಂದು ಹೇಳಿರುವ ಸುನೀಲ್ ಕುಮಾರ್, ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡಲು ಬಿಡದೇ ಅವತ್ತಿನ ಕಾಂಗ್ರೆಸ್ ಸರಕಾರ ನಪುಂಸಕತ್ವ ತೋರಿಸಿತ್ತು ಎಂದು ಕಿಡಿ ಕಾರಿದ್ದಾರೆ.
ಭಯೋತ್ಪಾದಕರ ಮುಂದೆ ಮಂಡಿಯೂರಿ ನಿಂತು ನಪುಂಸಕರಂತೆ ನಡೆದುಕೊಂಡಿದ್ದು ಕಾಂಗ್ರೆಸ್ ಎಂದು ಜರಿದಿರುವ ಸಚಿವರು, ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಲು, ಭಯೋತ್ಪಾದಕರ ಹುಟ್ಟಡಗಿಸಲು, ಪಾಕಿಸ್ತಾನಕ್ಕೆ ತಕ್ಕ ಬುದ್ದಿ ಕಲಿಸಲು ಆರೆಸಸ್ ಸಂಸ್ಕಾರದ ಆಡಳಿತ ಬರಬೇಕಾಯಿತು ಎಂದು ಹೇಳಿದ್ದಾರೆ.
ಅಲ್ಲದೇ 60 ವರ್ಷದ ಆಡಳಿತದಲ್ಲಿ ರಾಷ್ಟ್ರಧ್ವಜ, ಗಡಿ, ಭಯೋತ್ಪಾದನೆ ನಿಗ್ರಹದಲ್ಲಿ ಕಾಂಗ್ರೆಸ್ ನಪುಂಸಕನಂತೆ ನಡೆದುಕೊಂಡಿತ್ತು ಎಂದು ಸಚಿವ ಸುನೀಲ್ ಕುಮಾರ್ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.