ಮಂಡ್ಯ:ಇಂದು ಹಿಂದೂ ಸಂಘಟನೆಗಳು ಶ್ರೀರಂಗಪಟ್ಟಣ ಚಲೋಗೆ ಕರೆ ಕೊಟ್ಟಿರುವ ಹಿನ್ನೆಲೆ ಜಾಮೀಯಾ ಮಸೀದಿ ವ್ಯಾಪ್ತಿಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ ಸೆಕ್ಷನ್ 144 (Section 144) ಹಾಕಲಾಗಿದ್ದು, ಜಾಮೀಯಾ ಮಸೀದಿ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಇಂದು ನಡೆಯಬೇಕಿದ್ದ ವಾರದ ಸಂತೆಯೂ ರದ್ದುಗೊಳಿಸಲಾಗಿದೆ. ಜಾಮೀಯಾ ಮಸೀದಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಬಂದ್ ಮಾಡಲಾಗಿದೆ. ಇನ್ನೂ ಮಸೀದಿಯ ಮುಂಭಾಗದ ಎಲ್ಲಾ ಅಂಗಡಿಗಳು ಬಂದ್ ಮಾಡಿಸಲಾಗಿದೆ.

ಪಟ್ಟಣಕ್ಕೆ ಪ್ರವೇಶಿಸಿಸುವವರ ಮೇಲೆ ಪೊಲೀಸರ ಹದ್ದಿನ ಕಣ್ಣು ಇರಿಸಿದ್ದು, ಮಂಡ್ಯ, ಪಾಂಡವಪುರ, ಮೈಸೂರು, ಬನ್ನೂರು ಮಾರ್ಗದ 4 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕೂ ಕಡೆಯಿಂದ ಬರುವವರಿಗೆ ಶ್ರೀರಂಗಪಟ್ಟಣ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಶ್ರೀರಂಗಪಟ್ಟಣ ಪ್ರವೇಶಕ್ಕೂ ಮುನ್ನವೇ ತಡೆಯೊಡ್ಡಲು ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರ ಜೊತೆ ಸಹಕರಿಸದಿದ್ದರೆ ಬಂಧನಕ್ಕೂ ಪೊಲೀಸರು ನಿರ್ಧಾರ ಮಾಡಿದ್ದಾರೆ. ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡ.
ಮೊನೊಮೆಂಟಲ್ ಆಕ್ಟ್ ಪ್ರಕಾರ ಮಸೀದಿಯಲ್ಲಿ ಯಾರು ವಾಸ್ತವ್ಯ ಹೂಡುವ ಹಾಗೆ ಇಲ್ಲ. ಹೀಗಿದ್ದರೂ ಮಸೀದಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಮದರಸ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿರುವ ಆರೋಪಗಳು ಕೇಳಿ ಬಂದಿವೆ. ಮಸೀದಿಯ ಒಳಭಾಗದಲ್ಲೇ ನೂರಾರು ವಿದ್ಯಾರ್ಥಿಗಳಿದ್ದಾರೆ. ಅಕ್ರಮವಾಗಿ ಪ್ರವೇಶ ಮಾಡಿರುವ ವಿದ್ಯಾರ್ಥಿಗಳನ್ನು ಹೊರಗಡೆ ಕಳಿಸುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಜಾಮಿಯಾ ಮಸೀದಿ ಬಳಿ ಮಂಡ್ಯ ಪೊಲೀಸ್ ವಿರಿಷ್ಠಾಧಿಕಾರಿ ಯತೀಶ್ ಆಗಮಿಸಿದ್ದು, ಬಂದೋಬಸ್ತ್ ಪರಿಶೀಲನೆ ಮಾಡಿದ್ದಾರೆ. ಶ್ರೀರಂಗಪಟ್ಟಣದಾದ್ಯಂತ ಪೊಲೀಸರು ಹೈ ಅಲರ್ಟ್ ಮಾಡಲಾಗಿದೆ.