ಉಡುಪಿ: ಕಾರ್ಕಳದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸೋದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಶ್ರೀರಾಮಸೇನೆ ಮಂಗಳೂರು ವಿಭಾಗ ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದೆ. ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಒತ್ತಾಯಿಸಿದೆ.
ಶ್ರೀರಾಮ ಸೇನೆಯ ಮಂಗಳೂರು ವಿಭಾಗೀಯ ಅಧ್ಯಕ್ಷ ಮೋಹನ್ ಭಟ್ ಮುತಾಲಿಕ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದು, ಮುತಾಲಿಕ್ ಸ್ಪರ್ಧೆಯಿಂದ ಶ್ರೀರಾಮ ಸೇನೆ ಸಂಘಟನೆ ಒಡೆದು ಹೋಳಾಗುತ್ತಿದೆ. ಕಾರ್ಕಳದ ಸೋಲುವ ಕಣದಲ್ಲಿ ಮುತಾಲಿಕ್ ಸ್ಪರ್ಧೆ ಯಾಕೆ? ಎಂದ ಅವರು, ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮುತಾಲಿಕ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ, ಕಾರ್ಕಳದ ಓರ್ವ ಉದ್ಯಮಿ ಹಾಗೂ ವಕೀಲರ ಪ್ರಭಾವದಿಂದ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರೋಧಿಗಳು ಮುತಾಲಿಕ್ ರನ್ನು ಬಲಿಕೊಡುತ್ತಿದ್ದಾರೆ. ಕಾರ್ಕಳದಲ್ಲಿ ಚುನಾವಣೆ ಸ್ಪರ್ಧೆಗೆ ಪ್ರಮೋದ್ ಮುತಾಲಿಕ್ ರಿಗೆ ನಮ್ಮ ಬೆಂಬಲ ಇಲ್ಲ ಎಂದಿದ್ದಾರೆ.
ಒಂದು ವೇಳೆ ಸ್ಪರ್ಧಿಸುವುದಾದರೇ ಶ್ರೀರಾಮ ಸೇನ ಸಂಘಟನೆಯಿಂದ ಪ್ರತ್ಯೇಕಗೊಂಡು ಬೇಕಾದರೆ ಸ್ಪರ್ದಿಸಲಿ, ಫೆಬ್ರವರಿ 20ರಂದು ಈ ಕುರಿತು ಚರ್ಚಿಸಲು ಕಾರ್ಯಕರ್ತರ ಬೈಠಕ್ ಕರೆಯಲಾಗಿದ್ದು, ಇನ್ನೂ ಕಾಲ ಮಿಂಚಿಲ್ಲ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮೋಹನ್ ಭಟ್ ಒತ್ತಾಯಿಸಿದ್ದಾರೆ.