ಕೊಡಗು : ಕಳೆದ ವರ್ಷ ಸಪ್ಟಂಬರ್ ನಲ್ಲಿ ಪುತ್ತೂರು ಸಮೀಪದ ಕೌಡಿಚಾರ್ ನ ಮಡ್ಯಂಗಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಮಡಿಕೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಭಾಗಮಂಡಲದ ನಿಡ್ಯಮಲೆಯವರಾದ ಅಶೋಕ್ ಹಾಗೇ ಅವರ ಪತ್ನಿ ಶಿಕ್ಷಕಿ ಹೇಮಲತಾ ಅವರು ಹಾಗೇ ಅವರಿಬ್ಬರ ಮಕ್ಕಳು ಅಪಘಾತಕ್ಕೆ ಬಲಿಯಾಗಿದ್ದರು. ಇವರು ಮೂಡಬಿದರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ದೊಡ್ಡ ಮಗಳನ್ನು ನೋಡುವುದಕ್ಕೆ ಎಂದು ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಇವರ ಮಗಳು ಪ್ರಕೃತಿ ನಿಡ್ಯಮಲೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಆಕೆಯನ್ನು ನೋಡುವ ಮುನ್ನವೇ ಇವರು ಇಹಲೋಕ ತ್ಯಜಿಸಿದ್ದರು.
ಇನ್ನು ಪ್ರಕೃತಿ ಈ ವರ್ಷವಷ್ಟೇ ಪಿಯುಸಿ ಪೂರೈಸಿದ್ದಾಳೆ. ಹೆತ್ತವರ ಅಗಲಿಕೆಯ ನೋವಿನಲ್ಲಿಯೂ ಓದಿನಲ್ಲಿ ಆಕೆ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾಳೆ. ಹೆತ್ತವರು ಹಾಗೂ ಒಡಹುಟ್ಟಿದವರನ್ನು ಕಳೆದುಕೊಂಡ ನೋವಿನಲ್ಲಿಯೂ ಆಕೆ 92 ಶೇಕಡಾ ಅಂಕ ಗಳಿಸಿದ್ದಾಳೆ. ಇದೀಗ ಪ್ರಕೃತಿ ನಿಡ್ಯಮಲೆ ಸಾಧನೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.