ಮಂಗಳೂರು: ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಧ್ವಂಸ ಮಾಡಿರುವ ಘಟನೆ ಉಳ್ಳಾಲ ತಾಲೂಕಿನಲ್ಲಿ ನಡೆದಿದೆ.
ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸುತ್ತಿದ್ದ ಭಂಡಾರದ ಮನೆಯನ್ನು ರಾತ್ರೋ ರಾತ್ರಿ ಜೆಸಿಬಿ ಮೂಲಕ ಕೆಡವಿ ಹಾಕಲಾಗಿದೆ.
ದೈವಸ್ಥಾನದ ಆಡಳಿತ ಮಂಡಳಿ ನಡುವಿನ ಸಂಘರ್ಷದಲ್ಲಿ ಕಟ್ಟಡ ಧ್ವಂಸಗೊಳಿಸಲ್ಪಟ್ಟಿದ್ದು, ಈ ಸಂಬಂಧ ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಮತ್ತು ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಕೊಂಡಾಣ ದೇವಸ್ಥಾನಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದ್ದು, ಭಂಡಾರ ಮನೆಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲು ಪ್ರಯತ್ನ ನಡೆಸಿದ್ದು, ಅದಕ್ಕೆ ಗುತ್ತಿನ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.
ಖಾಸಗಿ ಗುತ್ತಿನ ಮನೆಯ ವಿರೋಧದ ಹಿನ್ನೆಲೆಯಲ್ಲಿ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣಕ್ಕೆ ಮುಂದಾಗಿದ್ದ ವ್ಯವಸ್ಥಾಪನಾ ಸಮಿತಿ ದೈವಸ್ಥಾನದ ಪಕ್ಕದ ಜಾಗದಲ್ಲಿ ಜನವರಿ 8 ರಂದು ಶಿಲಾನ್ಯಾಸ ನಡೆಸಿ ಕಟ್ಟಡ ಕಾಮಗಾರಿ ಶೇಕಡಾ 80 ರಷ್ಟು ಮುಗಿದಿತ್ತು.
ಕಟ್ಟಡ ಕೆಡವಿದ ಹಿನ್ನೆಲೆಯಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.