ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಇಂದು ತುಳು ಭಾಷೆ ಪ್ರತಿಧ್ವನಿಸಿದೆ. ಸ್ಪೀಕರ್ ಮತ್ತು ಕರಾವಳಿಯ ಶಾಸಕರು ತುಳು ಭಾಷೆಯಲ್ಲೇ ಮಾತನಾಡಿದ್ದಾರೆ.
ಗಮನ ಸೆಳೆಯುವ ಸೂಚನಾ ಕಲಾಪದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದರು.
ತುಳು ಭಾಷೆಯಲ್ಲೇ ಸದನಲ್ಲಿ ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದಾಗ, ಸ್ಪೀಕರ್ ಯು.ಟಿ. ಖಾದರ್ ಕೂಡಾ ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡಿದರು.ಈ ವೇಳೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೂಡಾ ತುಳುವಿನಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಪ್ರಸ್ತಾಪವನ್ನು ಬೆಂಬಲಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೀವು ತುಳುವಿನಲ್ಲಿ ಮಾತಾಡಿದರೆ ನಾನು ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದರು.
ತುಳು ಮಾತಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು, ತುಳು ಮಾತಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ, ನೀವು ಕೂಡಾ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದ ಸ್ಪೀಕರ್, ನೀವು ಕಾನೂನು ಇಲಾಖೆ, ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ತುಳು ಭಾಷೆಯನ್ನು ಎರಡನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡಿ ಎಂದು ಸಚಿವರಿಗೆ ಸೂಚಿಸಿದರು.ವರದಿಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಸಚಿವ ಶಿವರಾಜ ತಂಗಡಗಿ ಸದನದಲ್ಲಿ ಉತ್ತರ ನೀಡಿದರು.