ಬೆಂಗಳೂರು; ಥೈಲ್ಯಾಂಡ್ ನಲ್ಲಿ ನಿಧನರಾದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಮೃತದೇಹವನ್ನು ನಿನ್ನೆ ರಾತ್ರಿ 11-30 ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ತರಲಾಯಿತು. ಅಲ್ಲಿಂದ 1 ಗಂಟೆ ವೇಳೆಗೆ ಸ್ಪಂದನಾ ತಂದೆ ಮನೆ ಮಲ್ಲೇಶ್ವರಂನಲ್ಲಿರುವ ಬಿ ಕೆ ಶಿವರಾಂ ಅವರ ನವಾಸಕ್ಕೆ ಪಾರ್ಥೀವ ಶರೀರವನ್ನು ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯ ರಾತ್ರಿಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಜನ ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಅಲ್ಲದೇ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಕೂಡ ಭೇಟಿ ನೀಡಿ ರಾಘುಗೆ ಧೈರ್ಯ ತುಂಬಿದರು.
ಪತ್ನಿಯ ಪಾರ್ಥೀವ ಶರೀರದ ಮುಂದೆ ಏಕಾಂಗಿಯಾಗಿ ಕುಳಿತು ರೋಧಿಸುತ್ತಿರುವ ವಿಜಯ್ ರಾಘವೇಂದ್ರ ಅವರನ್ನು ನೋಡಿದರೆ ಎಂಥಹವರ ಕಣ್ಣಲ್ಲೂ ಕಣ್ಣೀರು ತರಿಸುವಂತಿದೆ. ಇನ್ನು ಇಂದು ಮಧ್ಯಾಹ್ನದವರೆಗೆ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಶ್ರೀರಾಂಪುರದಲ್ಲಿನ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ.