ಬೆಂಗಳೂರು: ಮೊನ್ನೆ ನಿಧನರಾದ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಪಾರ್ಥೀವ ಶರೀರ ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದು ಸದ್ಯ ಅವರ ತಂದೆ ಬಿ.ಕೆ ಶಿವರಾಂ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ಕಾರ್ಯ ನಡೆಯುತ್ತಿದೆ.
ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸ್ಪಂದನಾ ಅಂತಿಮದರ್ಶನವನ್ನು ಪಡೆಯುತ್ತಿದ್ದಾರೆ. ಇನ್ನೇನು 2 ಗಂಟೆಗೆ ಅಂತಿಮ ದರ್ಶನ ಮುಕ್ತಾಯಗೊಳ್ಳಲಿದ್ದು, ಕೆಲವೇ ಗಂಟೆಗಳಲ್ಲಿ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭಗೊಳ್ಳಲಿದೆ. ಈ ಬಳಿಕ ಮಲ್ಲೇಶ್ವರಂ 11ನೇ ಕ್ರಾಸ್ ಮೂಲಕ ಕೆ.ಸಿ ಜನರಲ್ ಆಸ್ಪತ್ರೆಯ ಮುಂಭಾಗದಲ್ಲಿ ಅಂತಿಮಯಾತ್ರೆ ಸಾಗಲಿದೆ.
ಅಂತಿಮ ಯಾತ್ರೆಗೂ ಮುನ್ನಾ ಈಗಾಗಲೇ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಮೃತದೇಹದ ಅಂತಿಮ ಸಂಸ್ಕಾರಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ. ಅಂತಿಮಯಾತ್ರೆಯಲ್ಲಿ ಆಗಮಿಸುವಂತ ಸ್ಪಂದನಾ ಅವರ ಪಾರ್ಥೀವ ಶರೀರವನ್ನು ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ನಲ್ಲಿ ಸಂಜೆ 4 ಗಂಟೆಯ ವೇಳೆಗೆ ಅಂತ್ಯಕ್ರಿಯೆ ನೆರೆವೇರಿಸಲಾಗುತ್ತದೆ.
ರಾಜ್ ಕುಟುಂಬಸ್ಥರು, ದೊಡ್ಡಣ್ಣ, ರಮೇಶ್ ಅರವಿಂದ್, ನಟಿ ರಾಧಿಕಾ, ಚರಣ್, ಸೃಜನ್ ಲೋಕೇಶ್, ವಿಜಯ್ ಪ್ರಕಾಶ್, ಸಾಯಿಪ್ರಕಾಶ್, ಸೇರಿದಂತೆ ವಿವಿಧ ಚಿತ್ರರಂಗದ ಗಣ್ಯರು ಅಂತಿಮ ದರ್ಶನವನ್ನು ಪಡೆದು, ನಟ ವಿಜಯರಾಘವೇಂದ್ರ ಅವರಿಗೆ ಸಾಂತ್ವನ ಹೇಳಿದರು.