ಕೊರೊನಾ ಲಾಕ್ ಡೌನ್ ನೀತಿ ಸಂಹಿತೆ ಜಾರಿಯಾದ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದರಿಂದ ಅನೇಕ ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಸಿಲುಕಿಕೊಂಡಿದ್ದರು. ಇವರಲ್ಲಿ ನಟಿ ಸೌಂದರ್ಯ ಜಯಮಾಲಾ ಕೂಡ ಒಬ್ಬರು.
ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿ ವಿಮಾನ ಹಾರಾಟ ಸ್ಥಗಿತಗೊಳಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಮಾರ್ಚ್ನಲ್ಲಿ ವಿಧಾನ ಪರಿಷತ್ ಕಲಾಪದ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈಗ ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರುವ ಪ್ರಕ್ರಿಯೆ ಆರಂಭವಾಗಿದೆ. ತುರ್ತಾಗಿ ತಾಯ್ನಾಡಿಗೆ ಬರಲು ಬಯಸಿರುವವವರನ್ನು ವಾಪಸ್ ಕರೆದುಕೊಂಡು ಬರಲಾಗುತ್ತಿದೆ. ನಟಿ ಸೌಂದರ್ಯ ಜಯಮಾಲಾ ಕೂಡ ರಾಜ್ಯಕ್ಕೆ ಮರಳಿದ್ದಾರೆ.
‘ನನ್ನ ಮಗಳು ಲಂಡನ್ನಲ್ಲಿ ಇದ್ದಾಳೆ. ಆದರೆ ಅಲ್ಲಿ ವಿಮಾನಗಳಿಲ್ಲ. ಕೊರೊನಾ ವೈರಸ್ ಹೆಗೆ ಹರಡುತ್ತಿದೆ ಎಂಬುದನ್ನು ಹೇಳಲಾಗುತ್ತಿಲ್ಲ. ನನ್ನ ಮಗಳ ರೀತಿ ಅಲ್ಲಿ ಅನೇಕರು ಅರ್ಧದಲ್ಲಿಯೇ ಸಿಲುಕಿಕೊಂಡಿದ್ದಾರೆ. ದಯವಿಟ್ಟು ಅವರಿಗೆ ಸೂಕ್ತ ವ್ಯವಸ್ಥೆ ಮಾಡಿ’ ಎಂದು ವಿಧಾನ ಪರಿಷತ್ ಕಲಾಪದ ವೇಳೆ ಜಯಮಾಲಾ ಕೇಳಿಕೊಂಡಿದ್ದರು.
ಸುಮಾರು 240 ಕನ್ನಡಿಗರನ್ನು ಹೊತ್ತ ಏರ್ ಇಂಡಿಯಾ ವಿಮಾನ ಸೋಮವಾರ ನಸುಕಿನ 3 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ಪ್ರಯಾಣಿಕರೊಂದಿಗೆ ಸೌಂದರ್ಯ ಜಯಮಾಲ ಸಹ ಮರಳಿದ್ದಾರೆ ಎನ್ನಲಾಗಿದೆ.
ವಿದೇಶದಿಂದ ಮರಳಿದವರನ್ನು ಮನೆಗೆ ತೆರಳಲು ಅವಕಾಶ ನೀಡುತ್ತಿಲ್ಲ. ಅವರನ್ನು ತ್ರೀಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ಗಳಿಗೆ ಕರೆದೊಯ್ಯಲಾಗುತ್ತಿದ್ದು, ಅವರು ಕ್ವಾರೆಂಟೀನ್ ಅವಧಿಯನ್ನು ಅಲ್ಲಿಯೇ ಕಳೆಯಬೇಕಿದೆ. ಇದಕ್ಕೆ ತಗುಲುವ ವೆಚ್ಚವನ್ನು ಅವರೇ ಭರಿಸಬೇಕಿದೆ.