ಮುಂಬೈ: ಮಹಾರಾಷ್ಟ್ರದ ಸಿಂಧ್ ದುರ್ಗ ಜಿಲ್ಲೆಯ ಮಾಳವನ್ ನಲ್ಲಿರುವ ಶಿವಸೇನಾ ಸಂಸದ ವಿನಾಯಕ್ ರಾವತ್ ಅವರ ಬಂಗಲೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಸೋಡಾ ಬಾಟಲಿಗಳನ್ನು
ಎಸದಿದ್ದಾರೆಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಭಾರಿಸುತ್ತಿದ್ದೆ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸಂಸದ ರಾವತ್ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಘಟನೆ ಬೆನ್ನಲ್ಲೆ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಸೋಡಾ ಬಾಟಲ್ ಎಸೆದಿರುವುದು ಮತ್ತಷ್ಟು ಕಾವು ಪಡೆದುಕೊಂಡಿದೆ.
ನಾಲ್ವರು ಅಪರಿಚಿತರು ರವಾತ್ ಬಂಗಲೆ ಮೇಲೆ ಸೋಡಾ ಬಾಟಲಿ ಎಸೆದು ಪರಾರಿಯಾಗಿದ್ದಾರೆ. ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 336, 34, 37 (1) ಮತ್ತು 135ರ ಅಡಿಯಲ್ಲಿ ಅಪರಿಚಿತರ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ
ಘಟನೆ ನಂತರ ರಾವತ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಪರಿಚಿತ ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಕ್ರೆ ಕುರಿತಂತೆ ರಾಣೆ ನೀಡಿದ ಹೇಳಿಕೆ ಹಿನ್ನಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಕೇಂದ್ರ ಸಚಿವ ರಾಣೆ ಅವರನ್ನು ಬಂಧಿಸಿದ ಬೆನ್ನಲ್ಲೆ ರಾಜ್ಯದಾದ್ಯಂತ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುತ್ತಿದೆ.


