ಬೆಳ್ತಂಗಡಿ; ಉತ್ತರಪ್ರದೇಶ ಲಕ್ನೋದ ಗುಲ್ ಜಾನ್ ನಗರ ಎಂಬಲ್ಲಿಂದ ನಾಪತ್ತೆಯಾಗಿದ್ದ ಬಾಲಕನ್ನು ಹೆತ್ತವರ ಮಡಿಲು ಸೇರಿಸಿದ ಬೆಳ್ತಂಗಡಿಯ ಸಿಯೋನ್ ಆಶ್ರಮದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸುಫಿಯಾನ್ (15) ಎಂಬ ಮಾನಸಿಕ ಅಸ್ವಸ್ಥ ಬಾಲಕ ಮೇ 15 ರಂದು ಮನೆಯಿಂದ ನಾಪತ್ತೆಯಾಗಿದ್ದ. ಲಕ್ನೋದಿಂದ ದೆಹಲಿಗೆ ಬಂದು, ಅಲ್ಲಿಂದ ಮಂಗಳೂರಿಗೆ ಆಗಮಿಸಿದ್ದ. ಈತನ ವಿಳಾಸ ಪತ್ತೆಯಾಗದ ಕಾರಣ ಬಳಿಕ ಆತನನ್ನು ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸಿಯೋನ್ ಆಶ್ರಮಕ್ಕೆ ದಾಖಲಿಸಲಾಗಿತ್ತು.
ಸಿಯೋನ್ ಆಶ್ರಮದಲ್ಲಿ ಬಾಲಕನಿಗೆ ಕೌನ್ಸಿಲಿಂಗ್ ಮತ್ತು ಸೂಕ್ತ ಚಿಕಿತ್ಸೆಗಳನ್ನು ನೀಡಲಾಯಿತು. ಇದರಿಂದ ಸುಧಾರಣೆ ಕಂಡ ಬಾಲಕ ನೀಡಿದ ಅಸ್ಪಷ್ಟ ಮಾಹಿತಿಗಳ ಆಧಾರದಲ್ಲಿ ಸಿಯೋನ್ ಆಶ್ರಮದ ಟ್ರಸ್ಟಿ ಸದಸ್ಯ ಸುಭಾಷ್ ಯು.ಪಿ. ಮತ್ತು ತಂಡದವರು ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಬಾಲಕನ ವಿಳಾಸ ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಬಾಲಕನ ಚಿಕ್ಕಪ್ಪ ಮಹಮ್ಮದ್ ಶಬೀರ್ ಹಾಗೂ ಚಿಕ್ಕಮ್ಮ ಶಕೀಲಾ ಬಾನು ಸಿಯೋನ್ ಆಶ್ರಮಕ್ಕೆ ಆಗಮಿಸಿ ಬಾಲಕನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.