ಮೈಸೂರು: ನಿವೃತ್ತ ಉಪನ್ಯಾಸಕರೊಬ್ಬರ ಕೊಲೆಗೆ ಸುಫಾರಿ ನೀಡಿದ ಆರೋಪದಲ್ಲಿ ಸೋಜುಗ’ದ ಹಾಡು ಖ್ಯಾತಿಯ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್(52) ಅವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಸಪ್ಟೆಂಬರ್ 20ರಂದು ಮೈಸೂರಿನ ಶರದಾದೇವಿ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಹತ್ಯೆ ಮಾಡಲಾಗಿತ್ತು. ಸದ್ಯ ಆರೋಪಿ ವಿಶ್ವನಾಥ್ ಭಟ್ ಪರಶಿವಮೂರ್ತಿ ಕೊಲೆಗೆ ₹7 ಲಕ್ಷ ಸುಪಾರಿ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ವಿಶ್ವನಾಥ್ ಭಟ್ ಮುಖ್ಯ ಶಿಕ್ಷಕರಾಗಿರುವ ಸಂಸ್ಕೃತ ಪಾಠ ಶಾಲೆ ವ್ಯವಹಾರದಲ್ಲಿ ಕೊಲೆಯಾದ ಪರಶಿವಮೂರ್ತಿ ಹಾಗೂ ವಿಶ್ವನಾಥ್ ನಡುವೆ ವೈಮನಸ್ಸಿತ್ತು ಎನ್ನಲಾಗಿದೆ.
ಎರಡು ವರ್ಷಗಳಿಂದ ಮಗಳು ಅನನ್ಯಾ ಭಟ್ ಹಾಗೂ ಹೆಂಡತಿಯನ್ನು ಬಿಟ್ಟು ವಿಶ್ವನಾಥ್ ಭಟ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸೋಜುಗದ ಸೂಜಿಮಲ್ಲಿಗೆ ಹಾಡಿನಿಂದ ಪ್ರಸಿದ್ಧಿ ಪಡೆದಿದ್ದ ಅನನ್ಯಾ ಭಟ್ ಅನೇಕ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿದ್ದಾರೆ. ರಾಮ ರಾಮ ರೇ ಸಿನಿಮಾದ ನಮ್ಮ ಕಾಯೋ ದ್ಯಾವನೇ, ಕೆಜಿಎಫ್ ಸಿನಿಮಾದ ಧೀರ ಧೀರ, ಟಗರು ಸಿನಿಮಾದ ಹೋಲ್ಡ್ ಆನ್ ಮತ್ತು ಮೆಂಟಲ್ ಹೋ ಜಾವಾ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಅನನ್ಯಾ ಭಟ್ ಹಾಡಿದ್ದಾರೆ.