ಬೆಂಗಳೂರು: ಸಿದ್ದರಾಮಯ್ಯ ಅವರು ಮೊದಲು ಅವರ ಆಳ, ಉದ್ದ, ಅಗಲ ನೋಡಿಕೊಳ್ಳಬೇಕು. ಪಿಎಸ್ಐಗಳ ಅಕ್ರಮ ನೇಮಕದ ಪಿತಾಮಹ ಆಗಿರುವ ಅವರ ಕಾಲದಲ್ಲಿನ ಹಗರಣಗಳ ಬಗ್ಗೆ ಮೊದಲು ತನಿಖೆ ನಡೆಸಬೇಕು. ಈ ಬಗ್ಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಹೇಳಿದರು.
ನಗರದ ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಪರಿಶೀಲನೆ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಬಗ್ಗೆ ಟ್ವೀಟ್ ಮಾಡುವ ಬದಲು, ಸಿದ್ದರಾಮಯ್ಯ ಅವರು ತಮ್ಮ ಆಳ, ಆಗಲ ನೋಡಿಕೊಳ್ಳಬೇಕು. ಅವರ ಅಧಿಕಾರದ ಅವಧಿಯಲ್ಲಿನ ಅಕ್ರಮ ಪಿಎಸ್ಐ ನೇಮಕಾತಿ ಹಗರಣದ ತನಿಖೆಯನ್ನು ಶಾಂತ ಕುಮಾರ್ ಆರಂಭಿಸಿ ಅಲ್ಲಿಗೆ ಸ್ಥಗಿತಗೊಳಿಸಿದರು. ಅವರ ಕಾಲದ ಅರ್ಕಾವತಿ, ಎಸ್ಐಟಿ, ವಕೀಲರ ನೇಮಕದ ಹಗರಣವರೆಗೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯಾದ ಬಳಿಕ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಅವರ ಕಾಲದ ಅಕ್ರಮಗಳು ಇಡೀ ಲೋಕಕ್ಕೆ ಗೊತ್ತಿದೆ. ಯಾವ ಜಾತಿಗೆ ಏನೇನು ನೀಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ಅವರು ಮೋಜು, ಮಸ್ತಿ ಮೂಲಕ ಅದ್ದೂರಿ ಉತ್ಸವದ ಆಚರಣೆಗೆ ಸಿದ್ದರಾಗುವ ಮೂಲಕ ಸಿದ್ದರಾಮಯ್ಯ ಅವರ ನಿಜ ಮುಖ ಎಲ್ಲರಿಗೂ ತಿಳಿಯುತ್ತಿದೆ ವಾಗ್ಧಾಳಿ ನಡೆಸಿದರು.
ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಆತಂಕ ಇಲ್ಲ. ಕಾಂಗ್ರೆಸ್ ಪಕ್ಷದೊಳಗೆ ಮಾತ್ರವೇ ಆತಂಕ ಇದೆ. ಅವರಲ್ಲಿನ ನಾಯಕರುಗಳೇ ಹೆಚ್ಚುಗಾರಿಕೆಯಿಂದ ಪೈಪೋಟಿ ನಡೆಯುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ನೆಲೆ ಸಿಗುವುದಿಲ್ಲ. ಮುಳುಗುತ್ತಿರುವ ಹಡಗಿನಲ್ಲಿ ಯಾರು ಹೋಗುವುದಿಲ್ಲ. ಯಾರು ಯಾವ ಉತ್ಸವ ಬೇಕಿದ್ದರೂ ಮಾಡಲಿ. ಎಷ್ಟು ಆಚರಣೆ ಬೇಕಿದ್ದರೂ ಮಾಡಲಿ. ಬೇಡ ಎಂದವರು ಯಾರು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಪ್ರಶ್ನಿಸಿದರು.