ಮಂಗಳೂರು ನಗರದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಅಪವಿತ್ರಗೊಳಿಸಿ ಅಪಮಾನ ಮಾಡಿದ ಆರೋಪಿ ಡೇವಿಡ್ ಯಾನೆ ದೇವದಾಸ್ ದೇಸಾಯಿಗೆ ಉಳ್ಳಾಲದ ಕೋಟೆಕಾರ್ ಬೀರಿಯಲ್ಲಿ ಶ್ರದ್ದಾಂಜಲಿ ಕೋರಿದ ಬ್ಯಾನರ್ ಹಾಕಲಾಗಿದೆ.
ಡೇವಿಡ್ ದೇಸಾಯಿ ಮತ್ತೆ ಎಂದೂ ಹುಟ್ಟಿ ಬರಬೇಡ, ಈ ಪವಿತ್ರ ಭಾರತದ ಮಣ್ಣಿನಲ್ಲಿ. ಸಮಾಜಘಾತುಕ ನೀಚ ಮತಾಂತರ ಮಿಷನರಿಗಳೇ ನಿಮ್ಮ ಮತ ಪ್ರಚಾರಕ್ಕಾಗಿ ಸನಾತನ ಧರ್ಮದ ದೈವ ದೇವರುಗಳನ್ನು ಅಶ್ಲೀಲವಾಗಿ ನಿಂದಿಸುವುದಾದರೆ ಈ ಮಣ್ಣಿನಲ್ಲಿ ನಿಮ್ಮಂತಹ ಅಧರ್ಮಿಯರ ನಾಶ ಖಡಾಖಂಡಿತ. “ಕ್ರಿಸ್ತನ ಬೇಳೆ ಬೇಯದು, ಈ ಕೃಷ್ಣನ ನಾಡಿನಲ್ಲಿ” ಎಂದು ಬ್ಯಾನರ್ ನಲ್ಲಿ ಬರೆಯಲಾಗಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲ ತಿಂಗಳಿಂದ ಮಂಗಳೂರು ನಗರದ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ದೈವಸ್ಥಾನ, ಮಸೀದಿ, ದರ್ಗಾ, ಗುರುದ್ವಾರಗಳಿಗೆ ಅಸಹ್ಯ ವಸ್ತುಗಳನ್ನು ಹಾಕಿ ಅಪಮಾನಗೊಳಿಸಿದ್ದ. ಕೊನೆಯದಾಗಿ ಮಾರ್ನೆಮಿ ಕಟ್ಟೆಯ ಕೊರಗಜ್ಜನ ಕಟ್ಟೆಗೆ ಅಸಹ್ಯ ವಸ್ತು ಹಾಕಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರನ್ವಯ ತನಿಖೆ ನಡೆಸಿ ಪೊಲೀಸರು ಬಂಧಿಸಿದ್ದರು.