ದುಬೈ: UAE ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅವರಿಗೆ ದುಬೈನಲ್ಲಿ ಲಾಟರಿಯಲ್ಲಿ 24 ಕೋಟಿ ರೂಪಾಯಿ ಬಹುಮಾನ ಬಂದಿದೆ.
ಶಿವಮೂರ್ತಿ ಪ್ರತಿತಿಂಗಳು ಲಾಟರಿಯನ್ನು ಖರೀದಿಸುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ಖರೀದಿಸಿದ್ದ ಎರಡು ಲಾಟರಿ ಟಿಕೆಟ್ ಗಳಲ್ಲಿ 202511 ನಂಬರಿನ ಒಂದು ಲಾಟರಿ ಟಿಕೆಟ್ಗೆ ಈ ಬಹುಮಾನ ಸಿಕ್ಕಿದೆ ಎಂದು ಗಲ್ಫ್ ನ್ಯೂಸ್ ವರದಿಮಾಡಿದೆ. ಮನೆಯಲ್ಲಿ ಕುಳಿತು ಲಕ್ಕಿ ಡ್ರಾ ಫಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಶಿವಮೂರ್ತಿ ಅವರಿಗೆ ಇವರ ನಂಬರ್ ಆಯ್ಕೆಯಾದಾಗ ನಂಬಲಸಾಧ್ಯವಾಗಿತ್ತು. ಅವರಿಗೆ 12 ಮಿಲಿಯನ್ ದಿರಾಮ್(24 ಕೋಟಿ ರೂ.) ಲಾಟರಿಯಲ್ಲಿ ಬಹುಮಾನ ಬಂದಿದೆ.
ಶಿವಮೊಗ್ಗದ ಶಿವಮೂರ್ತಿ 15 ವರ್ಷಗಳಿಂದ ಮೆಕಾನಿಕಲ್ ಇಂಜಿನಿಯರ್ ಆಗಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಟರಿಯಲ್ಲಿ ಬಂದ ಹಣದಲ್ಲಿ ಊರಿನಲ್ಲಿ ಮನೆ ನಿರ್ಮಿಸಿ ಉಳಿದ ಹಣವನ್ನು ಇಬ್ಬರು ಮಕ್ಕಳ ಭವಿಷ್ಯಕ್ಕೆ ಇಡುವುದಾಗಿ ಶಿವಮೂರ್ತಿ ಹೇಳಿದ್ದಾರೆ. ಶಿವಮೂರ್ತಿ ಅವರಿಗೆ 10 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ.