ಉಡುಪಿ; ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ, ಸುರತ್ಕಲ್ ಸಮೀಪದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಸಮೀಪದ ಕುಳಾಯಿ ನಿವಾಸಿಗಳಾದ ದಿನೇಶ್ ಶೆಟ್ಟಿ (20) ಮತ್ತು ಲಿಖಿತ್ ಕುಲಾಲ್ (21), ಆಕಾಶ್ ಕರ್ಕೇರ(24), ಪ್ರಸನ್ನ ಶೆಟ್ಟಿ (40) ಬಂಧಿತರು. ಮಾತನಾಡಲು ಇದೆ ಎಂದು ಶರತ್ ಶೆಟ್ಟಿಯನ್ನು ಪಾಂಗಾಳಕ್ಕೆ ಕರೆದ ಆರೋಪಿಗಳು, ಬಳಿಕ ಡ್ರ್ಯಾಗರ್ ನಿಂದ ಇರಿದು ಹತ್ಯೆ ಮಾಡಿದ್ದರು.
ಇನ್ನು ಬಂಧಿತರ ಪೈಕಿ ದಿನೇಶ್ ಮತ್ತು ಲಿಖಿತ್ನನ್ನು ಫೆ.14ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ಫೆ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರೆಸಲಾಗಿದೆ.
ಈ ಬಗ್ಗೆ ಮಾತನಾಡಿದ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚ್ಚಿಂದ್ರ, ಪಾಂಗಾಳದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ಡಿಸೆಂಬರ್ ತಿಂಗಳಲ್ಲಿ ಯೋಗೀಶ್ ಆಚಾರ್ಯ ಹಾಗೂ ಭರತ್ ಶೆಟ್ಟಿ ಹೋಗಿದ್ದು, ಈ ವೇಳೆ ಕೆಲವು ವ್ಯಕ್ತಿಗಳು ಯೋಗೀಶ್ ಆಚಾರ್ಯನಿಗೆ ಹಲ್ಲೆ ನಡೆಸಿದ್ದರು. ಈ ವೇಳೆ ಶರತ್ ಶೆಟ್ಟಿ, ಯೋಗೀಶ್ ಸಹಾಯಕ್ಕೆ ಬಾರದೆ ಸ್ಥಳದಿಂದ ಓಡಿಹೋಗಿದ್ದ. ಇದೇ ದ್ವೇಷದಿಂದ ಯೋಗೀಶ್ ಆಚಾರ್ಯ, ಭೂಗತ ಪಾತಕಿ ಕಲಿ ಯೋಗೀಶನನ್ನು ಸಂಪರ್ಕಿಸಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದಿದ್ದಾರೆ.
ದೈವದ ಮೊರೆ ಹೋದ ಕೆಲವೇ ದಿನಗಳಲ್ಲಿ ಆರೋಪಿಗಳ ಬಂಧನ:
ಇನ್ನು ಕಳೆದ ಶುಕ್ರವಾರ ಶರತ್ ಶೆಟ್ಟಿ ಅವರ ಬಾವ ಚಂದ್ರಹಾಸ ಶೆಟ್ಟಿ ಮಂಡೇಡಿ ಅವರ ಮನೆಯಲ್ಲಿ ಶ್ರೀ ಧೂಮಾವತಿ ಮತ್ತು ಪರಿವಾರ
ದೈವಗಳ ನೇಮ ನಡೆದಿತ್ತು. ಅಲ್ಲಿ ಅವರು ತನ್ನ ಬಾವನ ಸಾವಿಗೆ ಕಾರಣರಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ದೈವ ಬಲವನ್ನು ಒದಗಿಸಿಕೊಟ್ಟು, ಅವರ ಬಂಧನವಾಗಿ ಕಠಿಣ ಶಿಕ್ಷೆ ದೊರಕುವಂತೆ ಅನುಗ್ರಹಿಸುವಂತೆ ಕುಟುಂಬಸ್ಥರು ದೈವದ ಮೊರೆ ಹೋಗಿದ್ದರು.
ಪಾಂಗಾಳದಲ್ಲಿ ಕಾರಣಿಕ ಮೆರೆಯುತ್ತಿರುವ ಪಾಂಗಾಳ ಪಡು ಬಬ್ಬುಸ್ವಾಮಿಯ ನೇಮದ ದಿನದಂದೇ ಎಲ್ಲರಿಗೆ ಬೇಕಾದ ವ್ಯಕ್ತಿಯನ್ನು ಕೊಲೆಗೈದು, ಊರಿಗೆ ಕಳಂಕ ತಂದಿರುವ ಆರೋಪಿಗಳು ಯಾರೇ ಆಗಿರಲಿ, ಎಲ್ಲೇ ಅಡಗಿರಲಿ, ಅವರನ್ನು
ಶೀಘ್ರ ಕಾನೂನಿನ ಬಲೆಗೆ ಸಿಲುಕಿಸುತ್ತೇನೆ. ಅವರು ಮಾಡಿದ ತಪ್ಪಿಗೆ ಸೂಕ್ತ ಶಿಕ್ಷೆ ಅನುಭವಿಸುತ್ತಾರೆ. ಕಾನೂನಿನ ಶಿಕ್ಷೆಯೊಂದಿಗೆ ದೈವಗಳ ಶಿಕ್ಷೆಯೂ ಅವರಿಗೆ ಕಾದಿದೆ. ಹತ್ತು ದಿನದೊಳಗೆ ಎಲ್ಲಾ ಆರೋಪಿಗಳೂ ಪೊಲೀಸರ ವಶದಲ್ಲಿರುವಂತೆ ನೋಡಿಕೊಳ್ಳುತ್ತೇವೆ ಎಂದು ಧೂಮಾವತಿ ದೈವವು ಕುಟುಂಬದವರಿಗೆ ಅಭಯ ನೀಡಿತ್ತು. ಅದರ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದ್ದು. ದೈವದ
ಕಾರ್ಣಿಕ ರುಜುಮಾತಾಗಿದೆ.