ಜಾಮ್ನಗರದಲ್ಲಿ ನಡೆದ ಅನಂತ ಅಂಬಾನಿ -ರಾಧಿಕಾ ಮರ್ಜೆಂಟ್ ಅವರ ಮದುವೆಪೂರ್ವ ಕಾರ್ಯಕ್ರಮದಲ್ಲಿ ಟಾಲಿವುಡ್ ನಟ ರಾಮ್ಚರಣ್ ತೇಜ್ ಅವರನ್ನು ಬಾಲಿವುಡ್ ನಟ ಶಾರುಕ್ ಖಾನ್ ವೇದಿಕೆಗೆ ಆಹ್ವಾನಿಸುವಾಗ ‘ಇಡ್ಲಿ’ ಎಂದಿದ್ದಾರೆ ಎಂದು ರಾಮ್ಚರಣ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟನನ್ನು ಶಾರುಕ್ ‘ಇಡ್ಲಿ ವಡಾ ರಾಮ್ಚರಣ್ ಕಹಾ ಹೇ ತು’ ಎಂದು ಕರೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಅಕ್ರೋಶ ಹೊರಹಾಕಿದ್ದಾರೆ. ಅನಂತ ಅಂಬಾನಿ -ರಾಧಿಕಾ ಮರ್ಜೆಂಟ್ ಮದುವೆಪೂರ್ವ ಕಾರ್ಯಕ್ರಮಲ್ಲಿ ತೆಲುಗಿನ ಜನಪ್ರಿಯ ಹಾಡು ‘ನಾಟು ನಾಟು ಹಾಡಿಗೆ ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾರುಕ್, ರಾಮ್ಚರಣ್ ಅವರನ್ನು ವೇದಿಕೆ ಮೇಲೆ ಬರುವಂತೆ ಅಹ್ವಾನಿಸಿದ್ದರು.
ಈ ಕುರಿತ ವಿಡಿಯೊವೊಂದನ್ನು ರಾಮ್ ಚರಣ್ ಅಭಿಮಾನಿಗಳು ಹಂಚಿಕೊಂಡಿದ್ದು, ರಾಮ್ಚರಣ್ ಅವರನ್ನು ವೇದಿಕೆಗೆ ಕರೆಯುವ ವೇಳೆ ಶಾರುಕ್ ಅನೇಕ ಪದಗಳನ್ನು ಬಳಸಿರುವುದು ಕಾಣಬಹುದಾಗಿದೆ. ಈ ವೇಳೆ ಒಂದು ಕಡೆ ಅವರು ‘ಇಡ್ಲಿ’ ಎಂಬ ಪದವನ್ನು ಬಳಸಿರುವುದು ಅಸ್ಪಷ್ಟವಾಗಿ ಕೇಳಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾರುಕ್ ಅವರ ಇಡ್ಲಿ ವಡಾ ಹೇಳಿಕೆಗೆ ರಾಮ್ಚರಣ್ ಅವರ ಮೇಕಪ್ ಆರ್ಟಿಸ್ಟ್ ರಿಬಾ ಹಾಸನ್ ಕಿಡಿಕಾರಿದ್ದಾರೆ. ‘ರಾಮ್ಚರಣ್ನಂತಹ ಶ್ರೇಷ್ಠ ನಟರನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ಇದಾದ ಬೆನ್ನಲ್ಲೇ ಆ ಸ್ಥಳದಿಂದ ನಾನು ಹೊರ ಬಂದೆ’ ಎಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಎಲ್ಲದರ ನಡುವೆ ಕೆಲ ಅಭಿಮಾನಿಗಳು ಶಾರುಕ್ ಪರ ನಿಂತಿದ್ದು, ‘ಶಾರುಕ್ ಖಾನ್ ಅವರು ಹಿರಿಯ ನಟರಾಗಿದ್ದರೂ ವೇದಿಕೆಯ ಮೇಲೆ ರಾಮ್ ಚರಣ್ ಬರುತ್ತಿದ್ದಂತೆ ಅವರಿಗೆ ನಮಸ್ಕರಿಸಿದ್ದರು’ ಎಂದಿದ್ದಾರೆ.