ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಹಲವಾರು ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ಸುರಕ್ಷತೆಯ ದೃಷ್ಟಿಯಿಂದ ಜನವರಿ 14 ರಿಂದ ಮುಂದಿನ ಆದೇಶದವರೆಗೆ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಇನ್ನು ಅರಣ್ಯ ಅಧಿಕಾರಿಗಳಿಗೆ ನಿರ್ಬಂಧದ ಬಗ್ಗೆ ವ್ಯಾಪಕ ಪ್ರಚಾರ, ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಮತ್ತು ಎಲ್ಲಾ ಅಧಿಸೂಚಿತ ಚಾರಣ ವಲಯಗಳಲ್ಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದೊಳಗಿನ ಚಾರಣ ಮಾರ್ಗಗಳಿಗೆ ಈ ನಿಷೇಧ ಅನ್ವಯಿಸುತ್ತದೆ. ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಚಾರಣ ಸ್ಥಳಗಳು: ಗಡಿಕಲ್ಲು, ಕುದುರೆಮುಖ ಶಿಖರ, ಕುರಿಂಜಲ್, ವಾಲಿಕುಂಜ (ಎಸ್ಕೆ ಬಾರ್ಡರ್), ವಾಲಿಕುಂಜ (ಕರ್ವಾಶೆ), ನರಸಿಂಹ ಪರ್ವತ (ಕಿಗ್ಗಾ), ನರಸಿಂಹ ಪರ್ವತ (ಮಲಂದೂರು), ಕೊಡಚಾದ್ರಿ (ವಾಲೂರು), ಕೊಡಚಾದ್ರಿ (ವಾಲೂರು), ಕೊಡಚಾದ್ರಿ (ಹಿಡ್ಜೆಲುಮಣೆ) ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.ಸಾರ್ವಜನಿಕರು ಮತ್ತು ಸಾಹಸ ಪ್ರಿಯರು ಅರಣ್ಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮತ್ತು ಬೆಂಕಿಯ ಸಮಯದಲ್ಲಿ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಉಲ್ಲಂಘನೆಯಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


