ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವೀರ ಸಾವರ್ಕರ್ ವಿಚಾರದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಅವಹೇಳನ ಆರೋಪದಲ್ಲಿ ಎಸ್ ಡಿಪಿಐ ಪಕ್ಷದ ಮುಖಂಡ ರಿಯಾಜ್ ಕಡಂಬು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸೈಬರ್ ಕ್ರೈಂ ಪೊಲೀಸರು ರಿಯಾಜ್ ಕಡಂಬು ಬಂಧನ ಮಾಡಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ತೆರವು ವಿಚಾರವಾಗಿ ಸ್ಪೀಕರ್ ಯು.ಟಿ. ಖಾದರ್ ತನ್ನ ಅಭಿಪ್ರಾಯ ತಿಳಿಸಿದ್ದರು.
ಇದಕ್ಕೆ ವಿರುದ್ಧವಾಗಿ ರಿಯಾಜ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವ್ಯಕ್ತಿಯಿಂದ ಆರ್ ಎಸ್ ಎಸ್ ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ, ಎಂದಾದರೂ ಒಂದು ದಿನ ಎಸ್ ಡಿಪಿಐ ಅದೊರಳಗೆ ಲಗ್ಗೆ ಇಟ್ಟರೆ ಕಿತ್ತು ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ. ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡಾ. ಈ ಸಭಾಧ್ಯಕ್ಷರಿಗೆ ಚಾಲೆಂಜ್. ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ ಎಂದು ಯು.ಟಿ. ಖಾದರ್ ವಿರುದ್ದ ರಿಯಾಜ್ ಕಡಂಬು ಪೋಸ್ಟ್ ಮಾಡಿದ್ದರು. ಸದ್ಯ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ರಿಯಾಜ್ ಕಡಂಬು ವಿಚಾರಣೆ ಮುಂದುವರಿದಿದೆ.