ಬೆಳ್ತಂಗಡಿ: ಕೆಲ ವರ್ಷಗಳ ಹಿಂದೆ ತನ್ನ ಸಹೋದರಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗೆ ಒಂದು ವರ್ಷದ ಕಠಿಣ ಕಾರಾಗ್ರಹ ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿ ಬೆಳ್ತಂಗಡಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಲಯ ಇಂದು ತೀರ್ಪು ಪ್ರಕಟಿಸಿದೆ.
ಏನಿದು ಪ್ರಕರಣ?
2013ರ ಎಪ್ರಿಲ್ 13 ರಂದು ಮುಂಡಾಜೆ ಗ್ರಾಮದ ದೇವಿಗುಡಿ ಕೂಳೂರು ನಿವಾಸಿ ಆರೋಪಿ ಸತೀಶ್ ಯಾನೆ ಸ್ಕಾರ್ಪಿಯೋ ಸತೀಶ್ ಎಂಬಾತ ತನ್ನ ಸಹೋದರಿ ಸಜೀದಾ ಯಾನೆ ಸರಿತಾ ಎಂಬವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕ ಆಯುಧದಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿತ್ತು.
ಈ ಕುರಿತು ಸಜೀದಾರ ಪತಿ ಪ್ರವೀಣ್ ಡಿ ಎಂಬವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯ ಆಗಿನ ಮುಖ್ಯ ಆರಕ್ಷಕರಾಗಿದ್ದ ಹೊನ್ನಪ್ಪ ಗೌಡ ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮೊಕದ್ದಮೆಯಲ್ಲಿ ಒಟ್ಟು 8 ಮಂದಿಯನ್ನು ಸಾಕ್ಷಿಗಳಾಗಿ ವಿಚಾರಿಸಲಾಗಿದ್ದು, ವಾದ ವಿವಾದಗಳನ್ನು ಆಲಿಸಿದ ಬೆಳ್ತಂಗಡಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಲಯದ ನ್ಯಾಯಾಧೀಶರಾದ ಸತೀಶ್ ಕೆ.ಜಿ. ಯವರು ಆರೋಪಿ ಎಸಗಿರುವ ಅಪರಾಧವು ರುಜುವಾತಾದ ನಿಟ್ಟಿನಲ್ಲಿ ಆರೋಪಿಯನ್ನು ದೋಷಿಯೆಂದು ನಿರ್ಣಯಿಸಿ ಐಪಿಸಿ ಕಲಂ 324 ರಡಿ ಅಪರಾಧಕ್ಕಾಗಿ 1 ವರ್ಷ ಕಠಿಣ ಕಾರಾಗ್ರಹ ಶಿಕ್ಷೆ, 5000/- ದಂಡ, ದಂಡ ತೆರಲು ತಪ್ಪದಲ್ಲಿ 6 ತಿಂಗಳ ಸಾದಾ ಕಾರಾಗ್ರಹ ಶಿಕ್ಷೆ ಹಾಗೂ 2000/- ದಂಡ, ತೆರಲು ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಸರಿತಾರಿಗೆ ಸೂಕ್ತ ಪರಿಹಾರ ಪಡೆಯಲು ಆಗಸ್ಟ್ 7ರಂದು ಮಂಗಳೂರಿನ ದ.ಕ. ಜಿಲ್ಲಾ ಕಾನೂನು ಸೇವೆಗಳು ಪ್ರಾಧಿಕಾರಕ್ಕೆ ಹಾಜರಾಗುವಂತೆ ಆದೇಶಿಸಿ ತೀರ್ಪು ಹೊರಡಿಸಿರುತ್ತಾರೆ. ಪ್ರಕರಣದಲ್ಲಿ ಬೆಳ್ತಂಗಡಿ ಸ.ಸ. ಅಭಿಯೋಜಕರಾದ ದಿವ್ಯಾರಾಜ್ ವಾದ ಮಂಡಿಸಿರುತ್ತಾರೆ.
ಸ್ಕಾರ್ಪಿಯೋ ಸತೀಶ್ ಮೇಲೆ ಐದಕ್ಕೂ ಹೆಚ್ಚು ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ನಡೆದ ಕಳ್ಳತನ ಕೇಸ್ ಈತನ ಮೇಲಿದೆ. ಸದ್ಯ ಕಳ್ಳತನ ಕೇಸ್ ನಲ್ಲಿ ವರ್ಷಗಳಿಂದ ಮಂಗಳೂರು ಸಬ್ ಜೈಲಿನಲ್ಲಿದ್ದಾನೆ.